ತುರುವೇಕೆರೆ: ತಾಲ್ಲೂಕಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿಎಸ್.ಪುರ ಹೋಬಳಿಯ ಅವ್ವೇರಹಳ್ಳಿ ಜೆಡಿಎಸ್ ಕಾರ್ಯಕರ್ತರ ಮೇಲೆ ನಡೆಸಿದ ಹಲ್ಲೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲವಾಗಿದ್ದು, ಅವರನ್ನು ಕೂಡಲೇ ಬಂಧಿಸದಿದ್ದಲ್ಲಿ ಎಸ್ಪಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷದ ಅವ್ವೇರಹಳ್ಳಿ ಕೃಷ್ಣ ಮತ್ತು ದಯಾನಂದ್ ಅವರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿರುವುದರಿಂದ ಆಸ್ಪತ್ರೆ ಸೇರಿದ್ದಾರೆ. ಈ ಪ್ರಕರಣದಲ್ಲಿ ಹಾಲಿ ಶಾಸಕ ಮತ್ತು ಆತನ ಮಗನ ಮೇಲೆ 307 ಪ್ರಕರಣ ಸಿಎಸ್.ಪುರ ಠಾಣೆಯಲ್ಲಿ ದಾಖಲಾಗಿರುವಾಗ ಪೊಲೀಸರು ಈ ಆರೋಪಿಗಳನ್ನು ಏಕೆ ಬಂಧಿಸಿ, ಕ್ರಮಕೈಗೊಂಡಿಲ್ಲ ಎಂದು
ಪ್ರಶ್ನಿಸಿದರು.
‘ಈ ಪ್ರಕರಣದಲ್ಲಿ ಪೊಲೀಸರು ಕಾನೂನಿನ ರೀತಿ ಕೆಲಸ ಮಾಡಿಲ್ಲ. ಈ ಘಟನೆಯಲ್ಲಿ ನನ್ನ ಪಾತ್ರವಿಲ್ಲ. ನಮ್ಮ ಪಕ್ಷದ ಕಾರ್ಯಕರ್ತನಿಗೆ ತೊಂದರೆಯಾದಾಗ ಅವರ ಪರ ಮಾತನಾಡಿದ್ದೇನೆ. ಪಕ್ಷದ ಕೆಲ ನಿರಪರಾಧಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ್ದೀರಿ. ಇದಕ್ಕೆ ದೇವರು ನಿಮಗೆ ತಕ್ಕ ಶಾಸ್ತಿ ಮಾಡುವನು’ ಎಂದರು.
‘ನನ್ನ ಅಸ್ಥಿತ್ವದ ಬಗ್ಗೆ ಮಾತನಾಡಲು ನಿಮಗೇನು ನೈತಿಕತೆ ಇದೆ. ನನ್ನ ಅವಧಿಯಲ್ಲಿ ಸಿಎಸ್.ಪುರ ಹೋಬಳಿಗೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೀನಿ ಆದರೆ ಶಾಸಕರಾಗಿ ಇಷ್ಟು ವರ್ಷವಾದರೂ, ನಿಮ್ಮದೇ ಸರ್ಕಾರವಿದ್ದರೂ ತಾಲ್ಲೂಕಿಗೆ ಯಾವ ಶಾಶ್ವತ ಯೋಜನೆಗಳನ್ನು ತಂದಿಲ್ಲ. ಇದನ್ನು ತಾಲ್ಲೂಕಿನ ಜನ ಅರಿತಿದ್ದು ಮುಂದಿನ ದಿನಗಳ ಚುನಾವಣೆಯಲ್ಲಿ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದರು.
ಗೋಷ್ಠಿಯಲ್ಲಿ ವಿಜಯೇಂದ್ರ, ಮಂಗಿಕುಪ್ಪೆ ಬಸವರಾಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.