ADVERTISEMENT

ಜೀವ ಬಿಟ್ಟೇವು, ಭೂಮಿ ಬಿಡೆವು

ತಂಗನಹಳ್ಳಿ: ಕಲ್ಲುಗಣಿಗಾರಿಕೆಗೆ ಭೂ ಸ್ವಾಧೀನ; ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 8:05 IST
Last Updated 1 ಸೆಪ್ಟೆಂಬರ್ 2020, 8:05 IST
ರೈತರ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಬಂದಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ತಂಗನಹಳ್ಳಿ ರೈತರ ಜತೆ ಕೋಳಾಲ ಪಿಎಸ್ಐ ನವೀನ್ ಕುಮಾರ್ ಮಾತನಾಡಿದರು
ರೈತರ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಬಂದಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ತಂಗನಹಳ್ಳಿ ರೈತರ ಜತೆ ಕೋಳಾಲ ಪಿಎಸ್ಐ ನವೀನ್ ಕುಮಾರ್ ಮಾತನಾಡಿದರು   

ಕೊರಟಗೆರೆ: ‘ಪ್ರಾಣ ಬೇಕಿದ್ದರೂ ಬಿಟ್ಟೇವು, ಆದರೆ, ಅಂಗೈ ಅಗಲ ಜಮೀನು ಬಿಡೆವು. ಇರೋ ಒಂದೆಕರೆ ಜಮೀನನ್ನು ಕಿತ್ತುಕೊಳ್ಳೋದಾದ್ರೆ ನಮಗೂ, ನಮ್ಮ ಮಕ್ಕಳಿಗೂ ವಿಷ ಕೊಟ್ಬಿಡಿ. ಒಂದೇ ಸಾರಿ ಸತ್ತೋಯ್ತಿವಿ’.

ಇದು ತಾಲ್ಲೂಕಿನ ಕೋಳಾಲ ಹೋಬಳಿ ವ್ಯಾಪ್ತಿಯ ತಂಗನಹಳ್ಳಿ ರೈತರ ಅಳಲು. ತಂಗನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಜಮೀನಿನನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸ್ವಾಧೀನ ಪಡಿಸಿಕೊಂಡು ಖಾಸಗಿ ಸಂಸ್ಥೆಗೆ ಕಲ್ಲುಗಣಿಗಾರಿಕೆ ಸ್ಥಾಪನೆ ಉದ್ದೇಶಕ್ಕೆ ನೀಡಲು ಮುಂದಾಗಿದೆ.

ಈ ಕಾರಣದಿಂದ ಸೋಮವಾರ ಅಧಿಕಾರಿಗಳು ನೋಟಿಸ್ ನೀಡಲು ಗ್ರಾಮಕ್ಕೆ ಹೋದಾಗ ರೈತರು ಅಳಲು ತೋಡಿಕೊಂಡರು. ಈಗಾಗಲೇ ಎರಡು ಬಾರಿ ಭೂಸ್ವಾಧೀನಕ್ಕೆ ನೋಟಿಸ್ ನೀಡಲು ಅಧಿಕಾರಿಗಳು ಮುಂದಾದಾಗ ಅದನ್ನು ವಿರೋಧಿಸಿ ಪ್ರತಿಭಟಿಸಿದ್ದರು.

ADVERTISEMENT

ಭೂಸ್ವಾಧೀನದ ನೋಟಿಸ್ ಪಡೆಯುವಂತೆ ರೈತರನ್ನು ಒತ್ತಾಯಿಸಲು ಗ್ರಾಮಕ್ಕೆ ಬಂದ ಅಧಿಕಾರಿಗಳನ್ನು ಸುತ್ತುವರಿದ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಸೆ. 8ರಂದು ಗ್ರಾಮ ದಲ್ಲೆ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆಗೆ ಪರಿಹಾರಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.

ತಂಗನಹಳ್ಳಿ ಗ್ರಾಮಕ್ಕೆ ಹೊಂದಿ ಕೊಂಡಂತೆ ಬೆಟ್ಟ ಇದ್ದು, ಪುರಾತನ ದೇವಾಲಯ, ನೀರಿನ ಬಾವಿಗಳಿವೆ. ಈ ಜಾಗದಲ್ಲಿ ಬಹುತೇಕರು ಹಿಂದುಳಿದ ವರ್ಗದವರೇ ಇದ್ದಾರೆ.

ನೋಟಿಸ್ ಪಡೆದುಕೊಳ್ಳದಿದ್ದಲ್ಲಿ ಅಂಚೆ ಮೂಲಕ ಕಳುಹಿಸುವುದಾಗಿ, ಕಾನೂನು ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ಬೆದರಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದರು. ಗ್ರಾಮದ ವಿವಿಧ ಸರ್ವೆ ನಂಬರ್‌ನಲ್ಲಿ ಈಗಾಗಲೇ 49.5 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು 35 ರೈತರಿಗೆ ನೋಟಿಸ್ ನೀಡಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮುಂದಾಗಿದೆ.

***

ಜಮೀನು ಬಿಡುವುದಿಲ್ಲ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಮಾಡಿದ್ದರೂ, ರೈತರ ಜಮೀನು ಕಬಳಿಸಲು ಸರ್ಕಾರ ಹುನ್ನಾರ ನಡೆಸಲಾಗಿದೆ.
-ಟಿ.ಎಸ್.ರಾಜಣ್ಣ, ಗ್ರಾ.ಪಂ. ಮಾಜಿ ಸದಸ್ಯ

***

ಪುರಾತನ ದೇವಾಲಯ ಸೇರಿದಂತೆ ಕರಡಿ, ಚಿರತೆ ಕಾಡು ಪ್ರಾಣಿ ವಾಸಿಸುವ ಜಾಗದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಸರ್ಕಾರ ರೈತರ ಮುಂದಾಗಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ.
-ಬೋರಣ್ಣ, ತಾಲ್ಲೂಕು ಪಂಚಾಯಿತಿ ಸದಸ್ಯ

***

ಒಂದು ಎಕರೆ ಭೂಮಿ ಮಾತ್ರ ಇದೆ. ಈಗ ಆ ಭೂಮಿ ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ. ಜಮೀನು ಕಸಿದುಕೊಂಡರೆ ವಿಷ ಕುಡಿಬೇಕು.
-ರುದ್ರಾಂಬಿಕೆ, ತಂಗನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.