ತುಮಕೂರು: ನಗರದಲ್ಲಿ ಸಮಾನ ಮನಸ್ಕ ಸಂಘ ಸಂಸ್ಥೆಗಳ ಒಕ್ಕೂಟವು ಜಿಲ್ಲಾಡಳಿತದ ಸಹಕಾರದಲ್ಲಿ ಉಚಿತ ಜ್ವರ ತಪಾಸಣಾ ಕೇಂದ್ರವನ್ನು ತೆರೆದಿದ್ದು ಶನಿವಾರದಿಂದ ಕೇಂದ್ರವು ಕಾರ್ಯನಿರ್ವಹಿಸಲಿದೆ.
ನಗರದ ವೀರಸಾಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾಸ್ಪತ್ರೆ ಹಾಗೂ ಜಿಲ್ಲಾಡಳಿತದ ನೇರ ನಿಗಾವಣೆಗೆ ಒಳಪಟ್ಟು ವೀರಸಾಗರದ ಸ್ಟಾರ್ ಪ್ಯಾಲೇಸ್ ಹತ್ತಿರದ ಶಾಹೀನ್ ಕಿಡ್ಸ್ ಆವರಣದಲ್ಲಿ ಕ್ಲಿನಿಕ್ ತರೆಯಲಾಗಿದೆ. ಗಂಟಲು ದ್ರವ ಪರೀಕ್ಷೆ, ರಕ್ತ ಪರೀಕ್ಷೆ, ಎಕ್ಸ್–ರೇ ಮತ್ತಿತರ ಸೌಲಭ್ಯಗಳು ದೊರೆಯಲಿವೆ. ಐದು ಮಂದಿ ವೈದ್ಯರು ದಿನಕ್ಕೆ ಇಬ್ಬರಂತೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಕಾರ್ಯನಿರ್ವಹಿಸಲಿದೆ ಎಂದು ಒಕ್ಕೂಟದ ಸಂಚಾಲಕ ಇಕ್ಬಾಲ್ ಅಹಮದ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವೈದ್ಯರಾದ ಡಾ.ಇಂತಿಯಾಜ್, ಡಾ.ಮುದಸ್ಸಿರ್, ಡಾ.ಅಜ್ಗರ್ ಬೇಗ್, ಡಾ.ಅರೀಫುದ್ಧೀನ್, ಡಾ.ಇಮ್ರಾನ್ ಉಚಿತವಾಗಿ ಕೆಲಸ ಮಾಡಲು ಮುಂದೆ ಬಂದಿದ್ದಾರೆ. ಮೊ 6366937577, 6366937567 ಸಂಖ್ಯೆಗೆ ಕರೆ ಮಾಡಿ ದಿನದ 24 ಗಂಟೆ ಸೇವೆ ಪಡೆಯಬಹುದು ಎಂದು ಮಾಹಿತಿ ನೀಡಿದರು.
ಕ್ಲಿನಿಕ್ನಲ್ಲಿ ತಪಾಸಣೆಗೆ ಒಳಗಾಗುವ ರೋಗಿಯ ಸಂಪೂರ್ಣ ವಿವರಗಳನ್ನು ಆಯಾ ದಿನವೇ ವೀರಸಾಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾ ಆಸ್ಪತ್ರೆಗೆ ನೀಡಲಾಗುವುದು. ರೋಗಿಗೆ ಕೋವಿಡ್ ದೃಢಪಟ್ಟರೆ ಅವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುವುದು. ಇಲ್ಲವೆ ಕೋವಿಡ್ ಕೇರ್ ಸೆಂಟರ್ಗೆ ದಾಖಲಿಸಲಾಗುವುದು ಎಂದರು.
ತಪಾಸಣಾ ಕೇಂದ್ರವನ್ನು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.