ಪಾವಗಡ: ‘ಕಾನೂನಿನ ಬಗ್ಗೆ ತಿಳಿದುಕೊಂಡು ಮಾಜಿ ಶಾಸಕ ತಿಮ್ಮರಾಯಪ್ಪ ಮಾತನಾಡಬೇಕು. ಕಾರ್ಮಿಕ ಇಲಾಖೆ ಆಹಾರ ಕಿಟ್ಗಳನ್ನು ಬಡ ಅಸಂಘಟಿತ ಕಾರ್ಮಿಕರಿಗೆ ವಿತರಿಸಲಾಗಿದೆ’ ಎಂದು ಶಾಸಕ ವೆಂಕಟರವಣಪ್ಪ ತಿಳಿಸಿದರು.
ಪಟ್ಟಣದಲ್ಲಿ ಮಂಗಳವಾರ ಪೌಷ್ಟಿಕ ಆಹಾರ ವಿತರಣೆ ನಂತರ ಮಾತನಾಡಿದ ಅವರು, ‘ಕಾರ್ಮಿಕ ಸಚಿವನಾಗಿದ್ದಾಗ ಕಮ್ಮಾರ, ಚಮ್ಮಾರ, ಮಡಿವಾಳ, ಕುಂಬಾರ ಸೇರಿದಂತೆ ಅಸಂಘಟಿತ ಕಾರ್ಮಿಕರ ವಲಯಕ್ಕೆ ಸಾಂಪ್ರದಾಯಿಕ ಕಸುಬು ಮಾಡುವ ಜನಾಂಗದವರನ್ನು ಸೇರಿಸಲಾಗಿದೆ. ತಳ ಸಮುದಾಯದ ಬಡ ಜನರಿಗೂ ವಿವಾಹಕ್ಕೆ, ಶಿಕ್ಷಣಕ್ಕೆ ಅಗತ್ಯ ಆರ್ಥಿಕ ನೆರವು ಸಿಗುವಂತೆ ಮಾಡಲಾಗಿದೆ’ ಎಂದರು.
‘ಇದ್ಯಾವುದರ ಮಾಹಿತಿ ಇಲ್ಲದೆ ಕಾರ್ಮಿಕ ಇಲಾಖೆಯ ಪಡಿತರ ಕಿಟ್ ವಿತರಣೆಯಲ್ಲಿ ಅವ್ಯವಹಾರ ಆಗಿದೆ. ತಮಗೆ ಬೇಕಿರುವವರಿಗೆ ಕಿಟ್ ವಿತರಿಸಲಾಗಿದೆ ಎಂದು ಮಾಜಿ ಶಾಸಕರು ಮನಸೋ ಇಚ್ಚೆ ಮಾತನಾಡುವುದು ಸಮಂಜಸವಲ್ಲ. ಇಂತಹ ಅಪ್ರಬುದ್ಧ ಹೇಳಿಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.