ADVERTISEMENT

ಅಪಾಯದಲ್ಲಿ ದೇಶದ ಸ್ವಾತಂತ್ರ್ಯ

‘ಗಾಂಧೀ ನೂರೈವತ್ತು, ಸಮಾಜವಾದಿ ಎಂಭತ್ತೈದು’ ವಿಚಾರ ಯಾತ್ರೆಯ ರಾಜ್ಯ ಸಂಚಾಲಕ ಅರವಿಂದ ದಳವಾಯಿ ಆತಂಕ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 10:20 IST
Last Updated 23 ಫೆಬ್ರುವರಿ 2020, 10:20 IST
‘ಗಾಂಧೀ ನೂರೈವತ್ತು–ಸಮಾಜವಾದಿ ಎಂಭತ್ತೈದು’ ವಿಚಾರ ಯಾತ್ರೆ ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರು.
‘ಗಾಂಧೀ ನೂರೈವತ್ತು–ಸಮಾಜವಾದಿ ಎಂಭತ್ತೈದು’ ವಿಚಾರ ಯಾತ್ರೆ ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರು.   

ತುಮಕೂರು: ಆಳುವ ಸರ್ಕಾರಗಳು ಜಾರಿಗೊಳಿಸುತ್ತಿರುವ ಕಾನೂನುಗಳಿಂದ ಸ್ವಾತಂತ್ರ್ಯ ಅಪಾಯದಲ್ಲಿದೆ. ಧರ್ಮಾಧಾರಿತ ಇಲ್ಲವೇ ಹಿಂದೂರಾಷ್ಟ್ರ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಇದು ಗಾಂಧೀ ವಿಚಾರಧಾರೆಗಳಿಗೆ ವಿರುದ್ಧವಾಗಿದೆ ಎಂದು ‘ಗಾಂಧೀ ನೂರೈವತ್ತು–ಸಮಾಜವಾದಿ ಎಂಭತ್ತೈದು’ ವಿಚಾರ ಯಾತ್ರೆಯ ರಾಜ್ಯ ಸಂಚಾಲಕ ಅರವಿಂದ ದಳವಾಯಿ ಅಭಿಪ್ರಾಯಪಟ್ಟರು.

ಸರ್ವೋದಯ ಮಂಡಲ, ಬಾಪೂಜಿ ಶಿಕ್ಷಣ ಸಂಸ್ಥೆ, ಸಿಐಟಿಯು, ಸಮತಾ ಬಳಗ, ಸಹಮತ್ ಟ್ರಸ್ಟ್, ಜನಚಳವಳಿ ಕೇಂದ್ರದ ವತಿಯಿಂದ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಬ್ಯಾರಿಸ್ಟರ್ ಜಿನ್ನಾ, ಆರ್‌ಎಸ್‌ಎಸ್‌ ಗೋಳ್ವಾಲ್ಕರ್, ಸಾವರ್ಕರ್, ಹೆಡಗೆವಾರ್ ದ್ವಿರಾಷ್ಟ್ರ ಸಿದ್ದಾಂತದ ಮೂಲಕ ದೇಶದ ವಿಭಜನೆಗೆ ಕಾರಣರಾದರು. ಗಾಂಧಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಧರ್ಮಾಧಾರಿತ ಸಿದ್ದಾಂತವನ್ನು ಗಾಂಧೀಜಿ ಒಪ್ಪಲಿಲ್ಲ. ಆದರೆ ಕಾಂಗ್ರೆಸ್ ಮತ್ತು ಗಾಂಧಿ ದೇಶದ ವಿಭಜನೆಗೆ ಕಾರಣ ಎಂದು ಸುಳ್ಳು ಹರಡುವ ಕೆಲಸ ನಡೆಯುತ್ತಿದೆ. ಇದನ್ನು ಯುವಕರು ಅರ್ಥಮಾಡಿಕೊಳ್ಳಬೇಕು ಎಂದರು.

ADVERTISEMENT

ಹಿಂದೂ, ಸಿಖ್, ಮುಸ್ಲೀಂ, ಕ್ರಿಶ್ಚಿಯನ್, ಪಾರ್ಸಿ ಹೀಗೆ ಎಲ್ಲ ಧರ್ಮೀಯರು ಸೌಹಾರ್ದತೆಯಿಮದ ಬದುಕಬೇಕೆಂದು ಗಾಂಧಿ ಬಯಸಿದ್ದರು. ಆದರೆ ಇಂದಿನ ಕೇಂದ್ರ ಸರ್ಕಾರ ಧರ್ಮದ ಆಧಾರ ಮೇಲೆ ಧರ್ಮಗಳ ನಡುವಿನ ಸೌಹಾರ್ದ ನೆಲೆಗಳನ್ನು ವಿಭಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಇದೊಂದು ವೈಚಾರಿಕ ಯಾತ್ರೆ, ಶಾಂತಿ, ಅಹಿಂಸೆ ಸತ್ಯದ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ನಾಥೂರಾಮ್ ಗೋಡ್ಸೆ ಗಾಂಧಿ ಹತ್ಯೆ ಮಾಡಿದ ಸ್ಮೃತಿ ಸ್ಥಳದಿಂದ ಹೊರಟ ಈ ವಿಚಾರ ಯಾತ್ರೆ ತಮಿಳುನಾಡಿನಲ್ಲಿ ಅಂತ್ಯಗೊಳ್ಳಲಿದೆ ಎಂದರು.

ಕಾರ್ಯಕ್ರಮದಲ್ಲಿ ಯಾತ್ರಿಗಳಾದ ಅರುಣ್ ಕುಮಾರ್, ಸುನಿಲ್, ಆರಾಧನ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ, ಗಾಂಧಿವಾದಿ ಎಂ.ಬಸವಯ್ಯ, ಪುಟ್ಟಕಾಮಣ್ಣ, ಬಿ.ಆರ್.ಪಾಟೀಲ್‌ ಇದ್ದರು.

***

ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ

ದೇಶದಲ್ಲಿ ಆತಂಕದ ಸ್ಥಿತಿ ಇದೆ. ಪೊಲೀಸರು, ಅಧಿಕಾರಿಗಳು ಮತ್ತು ಸರ್ಕಾರಗಳು ಒಂದಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ನಿರ್ಬಂಧಿಸುವ ಕೆಲಸ ಮಾಡುತ್ತಿವೆ. ಕವಿಗಳು, ಬರಹಗಾರರು ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸುತ್ತಿವೆ. ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇದೆ. ಪದವಿ ಪಡೆದವರೂ ನಿರುದ್ಯೋಗಿಗಳಾಗಿ ಅಲೆಯುತ್ತಿದ್ದಾರೆ. ಸರ್ಕಾರ ಇದರ ಬಗ್ಗೆ ಆಲೋಚಿಸುವುದು ಬಿಟ್ಟು ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಎಂದು ಅರವಿಂದ ದಳವಾಯಿ ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.