ADVERTISEMENT

ಅರಣ್ಯಕ್ಕೆ ಬೆಂಕಿ: ಜಾತ್ರೆಗೆ ಹೊರಟಿದ್ದ ಬಾಲಕಿ ಸಾವು

ದೇವರಾಯನದುರ್ಗದ ಜಾತ್ರೆಗೆ ತೆರಳುವಾಗ ಅವಘಡ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 16:51 IST
Last Updated 7 ಮಾರ್ಚ್ 2023, 16:51 IST

ತುಮಕೂರು: ತಾಲ್ಲೂಕಿನ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಬೆಂಕಿಯ ಜ್ವಾಲೆಗೆ ಸಿಲುಕಿ ಬಾಲಕಿ ಮಾನಸ (13) ಮೃತಪಟ್ಟಿದ್ದಾರೆ.

ಮಾನಸ ಇರಕಸಂದ್ರ ಕಾಲೊನಿ ನಿವಾಸಿ. ದೇವರಾಯನದುರ್ಗದಲ್ಲಿ ನಡೆಯಲಿದ್ದ ರಥೋತ್ಸವಕ್ಕೆ ಜಿ.ನಾಗೇನಹಳ್ಳಿ ಗ್ರಾಮದ ಮೂಲಕ ಅರಣ್ಯ ಪ್ರದೇಶದ ಕಾಲು ದಾರಿಯಲ್ಲಿ ಹೋಗುತ್ತಿದ್ದ ಸಮಯದಲ್ಲಿ ಅವಘಡ ಸಂಭವಿಸಿದೆ. ಜತೆಯಲ್ಲಿ ಇದ್ದ ಇನ್ನಿಬ್ಬರು ಬಾಲಕಿಯರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅರಣ್ಯ ಪ್ರದೇಶದ ಕೆಳ ಭಾಗದ ಜಮೀನಿನಲ್ಲಿ ಕಾಣಿಸಿಕೊಂಡ ಬೆಂಕಿ ಬೆಟ್ಟಕ್ಕೆ ತೆರಳುವ ಕಾಲು ದಾರಿಯನ್ನು ಆವರಿಸಿದೆ. ಇದನ್ನು ಗಮನಿಸದೆ ಬಾಲಕಿಯರು ಮುಂದೆ ಸಾಗಿದ್ದು, ಗಾಳಿ ಬೀಸಿದ ರಭಸಕ್ಕೆ ಬೆಂಕಿಯ ಜ್ವಾಲೆ ತಗುಲಿದೆ.

ರಥೋತ್ಸವಕ್ಕೆ ಐವರು ಬಾಲಕಿಯರು ಒಟ್ಟಾಗಿ ಅರಣ್ಯ ಪ್ರದೇಶದ ಕಾಲು ದಾರಿಯಲ್ಲಿ ನಡೆದುಕೊಂಡು ತೆರಳುತ್ತಿದ್ದ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ಅಗ್ನಿ ಶಾಮಕ ದಳ, ಅರಣ್ಯ ಇಲಾಖೆಯ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ಅರಣ್ಯ ಪ್ರದೇಶಕ್ಕೆ ಹೆಚ್ಚಿನ ಹಾನಿಯಾಗಿಲ್ಲ.

ADVERTISEMENT

**

ಬಸ್‌ ಡಿಕ್ಕಿ: ವ್ಯಕ್ತಿ ಸಾವು

ತುಮಕೂರು: ತಾಲ್ಲೂಕಿನ ಚಿನಗ ಗ್ರಾಮದ ಬಳಿ ಮಂಗಳವಾರ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಾಗಿ ಸುಮಾರು 35 ವರ್ಷದ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ.

ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ತುಮಕೂರು ಕಡೆಯಿಂದ ಕೊರಟಗೆರೆಯತ್ತ ತೆರಳುತ್ತಿದ್ದ ಬಸ್‌ ಡಿಕ್ಕಿಯಾಗಿದೆ. ಮೃತ ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.