ಶಿರಾ: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ತಮ್ಮ ಕೃತಿಗಳಲ್ಲಿ ಗ್ರಾಮೀಣ ಬದುಕನ್ನು ಸೋಜಿಗದ ರೀತಿ ಕಟ್ಟಿ ಕೊಟ್ಟಿದ್ದು, ಅವರ ಬದುಕು, ಬರಹ ಯುವ ಪೀಳಿಗೆಗೆ ಮಾದರಿಯಾಗಬೇಕು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧಿ ಸ್ಮಾರಕ ನಿಧಿ, ಗೊರೂರ ಸಾಹಿತ್ಯ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಡೆದ ಗೊರೂರರ ಬದುಕು ಬರಹ ಕುರಿತು ವಿಚಾರಣ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕನ್ನಡ ದ ಪ್ರಮುಖ ಸಾಹಿತಿಗಳಲ್ಲಿ ಗೊರೂರು ಒಬ್ಬರು. ಗಂಭೀರ ಸಾಹಿತ್ಯ ರೂಪಿತವಾಗುತ್ತಿದ್ದ ಕಾಲಘಟ್ಟದಲ್ಲಿ ಗೊರೂರರು ತಮ್ಮ ಕಥೆ, ಕಾದಂಬರಿ ಮತ್ತು ಪ್ರಬಂಧಗಳಲ್ಲಿ ನವಿರಾದ ಹಾಸ್ಯವನ್ನು ಬಳಕೆಗೆ ತಂದ ಕನ್ನಡದ ಮೊದಲಿಗರು ಎಂದರು.
ತುಮಕೂರು ವಿ.ವಿ ಪ್ರಾಧ್ಯಾಪಕ ಸಿಬಂತಿ ಪದ್ಮನಾಭ ಮಾತನಾಡಿ, ಗೊರೂರರು ಹೇಮಾವತಿ, ಪುನರ್ಜನ್ಮ, ಮೆರವಣಿಗೆ, ಊರ್ವಶಿ, ರಾಜನರ್ತಕಿ, ಬೈಲಹಳ್ಳಿ ಸರ್ವೆ ಮೊದಲಾದ ಕೃತಿಗಳಲ್ಲಿ ಹಾಸ್ಯದೊಂದಿಗೆ ಬದುಕು ಬದಲಿಸಿಕೊಳ್ಳಲು ಆರೋಗ್ಯಕರ ಬದುಕು ಕಟ್ಟಿಕೊಟ್ಟಿದ್ದಾರೆ ಎಂದರು.
ಪ್ರಾಂಶುಪಾಲ ಚಂದ್ರಯ್ಯ ಬೆಳವಾಡಿ ಮಾತನಾಡಿ, ಗೊರೂರರು ಗಾಂಧಿ ಅವರ ಪ್ರಭಾವದಿಂದ 8ನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿ ಸ್ವಾತಂತ್ರ್ಯ ಚಳುವಳಿಗೆ ಧುಮುಕಿ, ಗಾಂಧಿ ಅನುಯಾಯಿಯಾಗಿ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿ ಸೆರೆವಾಸ ಸಹ ಅನುಭವಿಸಿದ್ದರು. ಇವರ ಬರಹಗಳಲ್ಲಿ ಸಹ ಗಾಂಧಿ ವಿಚಾರಗಳು ಮೇಳೈಸಿವೆ ಎಂದರು.
ಕಸಾಪ ಅಧ್ಯಕ್ಷ ಬಿ.ಪಿ. ಪಾಂಡುರಂಗಯ್ಯ, ಕಮಲಾನರಸಿಂಹ, ಗೊರೂರರ ಪುತ್ರಿ ಕೆನಡಾ ನಿವಾಸಿ ವಾಸಂತಿ ಮೂರ್ತಿ, ಶ್ರೀನಿವಾಸ, ರೇಣುಕಮ್ಮ, ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮೂದ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.