ತುಮಕೂರು: ‘ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡರನ್ನು ನಾನು ಸೋಲಿಸಲಿಲ್ಲ. ‘ಗಂಗೆಯ ಶಾಪ’ದಿಂದ ಅವರು ಸೋತಿದ್ದಾರೆ’ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.
ಶನಿವಾರ ಹೇಮಾವತಿ ನಾಲಾ ವೀಕ್ಷಣೆ ಮಾಡುವ ಸಮಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ‘ ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಗೆ ನೀರು ಕೊಡುವ ಯೋಜನೆ ರೂಪಿಸುವಾಗಲೂ ವಿರೋಧಿಸಿದ್ದರು. ನಂತರ ನೀರು ಬಿಡುವಾಗಲೂ ವಿರೋಧಿಸಿಕೊಂಡು ಬಂದಿದ್ದಾರೆ. ಹೀಗಾಗಿಯೇ ನಿಗದಿತ ಪ್ರಮಾಣದಲ್ಲಿ ನೀರು ತುಮಕೂರು ಜಿಲ್ಲೆಗೆ ಹರಿದಿಲ್ಲ’ ಎಂದು ಆರೋಪಿಸಿದರು.
‘ತುಮಕೂರು ಜಿಲ್ಲೆಗೆ ನೀರು ನಿಗದಿತ ಪ್ರಮಾಣದಲ್ಲಿ ದೊರಕದೇ ಇರುವುದಕ್ಕೆ ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರ ರಾಜಕೀಯ ಹಿಡಿತವೂ ಕಾರಣವಾಗಿದೆ. ಹೇಮಾವತಿ ನೀರಾವರಿ ಸಲಹಾ ಸಮಿತಿಗೆ ಆ ಜಿಲ್ಲೆಯ ಉಸ್ತುವಾರಿ ಸಚಿವರೇ ಅಧ್ಯಕ್ಷರನ್ನಾಗಿ ಮಾಡುವುದರಿಂದ ಅವರು ತಮ್ಮ ಜಿಲ್ಲೆಯ ಹಿತಾಸಕ್ತಿಗೆ ಕೆಲಸ ಮಾಡುತ್ತಾರೆ. ಇದರಿಂದ ತುಮಕೂರು ಜಿಲ್ಲೆಗೆ ನಿಗದಿತ ಪ್ರಮಾಣದ ನೀರು ಲಭಿಸದೇ ನಿರಂತರ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಸಮಿತಿಗೆ ಆ ಜಿಲ್ಲೆಯ ಉಸ್ತುವಾರಿ ಸಚಿವರ ಬದಲು ಜಲಸಂಪನ್ಮೂಲ ಸಚಿವರೇ ಅಧ್ಯಕ್ಷರಾಗಬೇಕು ಎಂದು ಒತ್ತಾಯ ಮಾಡಿದ್ದೇವೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.