ತುಮಕೂರು: ಮಹಾತ್ಮ ಗಾಂಧೀಜಿ ಅವರ ಚಿಂತನೆ ಗ್ರಾಮರಾಜ್ಯವಾಗಿತ್ತೇ ಹೊರತು ರಾಮರಾಜ್ಯವಾಗಿರಲಿಲ್ಲ ಎಂದು ಸಾಹಿತಿ ಎನ್.ನಾಗಪ್ಪ ನುಡಿದರು.
ಗುಬ್ಬಿ ತಾಲ್ಲೂಕು ಎನ್.ರಾಂಪುರ ಗ್ರಾಮದಲ್ಲಿ ಜಿಲ್ಲಾ ಸರ್ವೋದಯ ಮಂಡಲ ಹಾಗೂ ಮಹಾತ್ಮಗಾಂಧಿ ಚಿಂತನ ಪ್ರತಿಷ್ಠಾನದಿಂದ ಆಯೋಜಿಸಿದ್ದ ಗ್ರಾಮಸಭೆ, ಗ್ರಾಮವಾಸ್ತವ್ಯ ಹಾಗೂ ಕಾಲ್ನಡಿಗೆ ಜಾಥಾದಲ್ಲಿ ಮಾತನಾಡಿದರು.
ಗ್ರಾಮೀಣ ಭಾರತವೇ ನಿಜವಾದ ಭಾರತ ಎಂದು ನಂಬಿದ್ದ ಗಾಂಧಿ ಅವರು ಹಳ್ಳಿಯ ಉದ್ದಾರವೇ ದೇಶದ ಉದ್ದಾರ ಎಂದು ಭಾವಿಸಿದ್ದರು. ಅಲ್ಲದೇ ಗ್ರಾಮೋದ್ಯಮಕ್ಕೂ ಹೆಚ್ಚಿನ ಒತ್ತು ನೀಡಿದ್ದರು ಎಂದರು.
ಗಾಂಧೀಜಿ ಅವರ ನೈತಿಕತೆ, ಅಂಬೇಡ್ಕರ್ ಅವರ ಸಾಮಾಜಿಕ ಚಿಂತನೆ, ಕಮ್ಯುನಿಷ್ಟರ ಆರ್ಥಿಕ ನೀತಿ ಅನುಸರಿಸಿದ್ದಲ್ಲಿ ಗ್ರಾಮಗಳು ಅಭಿವೃದ್ಧಿ ಆಗುತ್ತದೆ ಎಂದು ತಿಳಿಸಿದರು.
ನೈಸರ್ಗಿತ ಕೃಷಿಕ ತಿಪ್ಪೇಸ್ವಾಮಿ, ರಾಸಾಯನಿಕ ಬಳಕೆಯಿಂದ ಭೂಮಿ ಶಾಶ್ವತವಾಗಿ ಸತ್ವಹೀನವಾಗುತ್ತಿದೆ. ಸಹಜ ಕೃಷಿಯಿಂದ ಮಾತ್ರ ಭೂಮಿ ಸತ್ವವನ್ನು ಉಳಿಸಲು ಸಾಧ್ಯ. ಒಂದು ನಾಟಿ ಹಸು ಸಾಕಿದ್ದರೆ ಗಂಜಲ ಮತ್ತು ಸಗಣಿಯಿಂದ 30 ಎಕರೆ ಕೃಷಿ ಭೂಮಿ ಅಭಿವೃದ್ಧಿಪಡಿಸಲು ಸಾಧ್ಯ ಎಂದರು.
ರಂಗಕರ್ಮಿ ಉಗಮ ಶ್ರೀನಿವಾಸ್,ಜಿಲ್ಲಾ ಸರ್ವೋದಯ ಮಂಡಲದ ಕಾರ್ಯದರ್ಶಿ ಆರ್.ವಿ. ಪುಟ್ಟಕಾಮಣ್ಣ ಮಾತನಾಡಿದರು. ಗ್ರಾಮದ ಸುತ್ತಮುತ್ತ ಗೋಕಟ್ಟೆಗಳ ಪುನಶ್ಚೇತನ ಮಾಡಬೇಕು. ರಸ್ತೆಗೆ ಡಾಂಬರ್ ಹಾಕಬೇಕು. ಕರ್ನಾಟಕ ಪಬ್ಲಿಕ್ ಶಾಲೆ ಸೌಲಭ್ಯ ಕಲ್ಪಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಬೇಕು ಎಂದು ಗ್ರಾಮಸ್ಥರು ಸಭೆಯಲ್ಲಿ ಆಗ್ರಹಿಸಿದರು.
ಹೊದಲೂರು ಗಂಗಾಧರ್ ಸ್ವರಚಿತ ಕವನಗಳನ್ನು ವಾಚಿಸಿದರು. ಚಿಕ್ಕನಾಯಕನಹಳ್ಳಿ ತಾಲ್ಲೂಕು ಸರ್ವೋದಯ ಮಂಡಲ ಅಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಜಿ. ಸಿದ್ದರಾಮಯ್ಯ, ಸರ್ವೋದಯ ಮಂಡಲದ ಗುಬ್ಬಿ ತಾಲ್ಲೂಕು ಕಾರ್ಯದರ್ಶಿ ಆರ್.ಬಿ. ಜಯಣ್ಣ, ತಾಲೂಕು ಕಸಾಪ ಅಧ್ಯಕ್ಷ ಶಿವಪ್ಪ ಮಾದಾಪುರ, ಪವನ್ ಕುಮಾರ್ ತುಮಕೂರು, ತ್ಯಾಗರಾಜ್, ಪಾಲನೇತ್ರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.