ಹುಳಿಯಾರು ಹೋಬಳಿ ನುಲೆನೂರು ಬಳಿ ಬೆಳವಣಿಗೆ ಕಾಣದ ಶೇಂಗಾ ಗಿಡ
ಹುಳಿಯಾರು: ಹೋಬಳಿ ವ್ಯಾಪ್ತಿಯ ನುಲೆನೂರು ಗ್ರಾಮದ ಸುತ್ತಮುತ್ತ ಪೂರ್ವ ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಶೇಂಗಾ ಮಳೆ ಕೊರತೆಯಿಂದ ಕಾಯಿ ಕಟ್ಟಿಲ್ಲ. ಬಿತ್ತನೆ ಮಾಡಿದ್ದ ಬೀಜ ಸಹ ಕೈಸೇರದ ಆತಂಕದಲ್ಲಿದ್ದಾರೆ ರೈತರು.
ಶೇಂಗಾ ನಾಡು ಶಿರಾ ಸೀಮೆಯ ಸೆರಗಿಗೆ ಹೊಂದಿಕೊಂಡಿರುವ ಹುಳಿಯಾರು ಹೋಬಳಿಯ ಕೆಲ ಗ್ರಾಮಗಳಲ್ಲಿ 30 ವರ್ಷಗಳ ಹಿಂದೆ ನೆಲಗಡಲೆ ಬೆಳೆಯುತ್ತಿದ್ದರು. ಒಂದು ಕಾಲದಲ್ಲಿ ತೆಂಗಿನ ಜತೆ ಪ್ರಮುಖ ವಾಣಿಜ್ಯ ಬೆಳೆಯಾಗಿ ರೈತರ ಕೈ ಹಿಡಿದಿದ್ದ ಶೇಂಗಾ ಬಿತ್ತನೆಯನ್ನು ಕೈ ಬಿಟ್ಟಿದ್ದರು. ಬೆಲೆ ಇಳಿಕೆ, ಮಳೆ ಕೊರತೆ, ಕಾಡು ಪ್ರಾಣಿಗಳ ಉಪಟಳ, ಬೆಳೆಗೆ ತಗುಲುವ ಬೆಂಕಿ ರೋಗದಿಂದ ಬೇಸತ್ತಿದ್ದರು.
ಇತ್ತೀಚಿನ ವರ್ಷಗಳಲ್ಲಿ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯ ಶಿರಾ, ಪಾವಗಡ ತಾಲ್ಲೂಕುಗಳಲ್ಲಿ ವಿವಿಧ ಕಾರಣಗಳಿಂದ ಬಿತ್ತನೆ ಕುಂಠಿತ ಗೊಂಡಿತು. ಈ ನಡುವೆ ಶೇಂಗಾಕ್ಕೆ ಉತ್ತಮ ಬೆಲೆ ಕೂಡ ಬಂದಿದ್ದರಿಂದ ರೈತರು ಮತ್ತೆ ಅತ್ತ ವಾಲುವಂತೆ ಮಾಡಿತು. ನುಲೆನೂರು ಗ್ರಾಮದ ಸುತ್ತಮುತ್ತ ರೈತರು ಮಿಡಿಸೌತೆ ಬೆಳೆದು ನಷ್ಟ ಅನುಭವಿಸಿ ಮೂರು ವರ್ಷಗಳಿಂದ ಮತ್ತೆ ಪೂರ್ವ ಮುಂಗಾರಿನಲ್ಲಿ ಮಳೆಯಾಶ್ರಿತದಲ್ಲಿ ಶೇಂಗಾ ಬೆಳೆಯಲು ಮುಂದಾಗಿದ್ದರು.
ಕಳೆದ ಎರಡು ವರ್ಷ ಅಲ್ಪಸ್ವಲ್ಪ ಮಳೆಯಾದ ಕಾರಣ ಬೆಳೆ ಬಂದು ರೈತರು ಒಂದಿಷ್ಟು ಹಣ ಗಳಿಸಿದರು. ಇದರಿಂದ ಪ್ರಭಾವಿತರಾಗಿ ಪ್ರಸಕ್ತ ಮುಂಗಾರಿನಲ್ಲಿ ಹೆಚ್ಚು ಜನ ರೈತರು ಶೇಂಗಾ ಬಿತ್ತನೆ ಮಾಡಿದ್ದರು. ಕೆಲ ರೈತರು ಕ್ವಿಂಟಲ್ ಗಟ್ಟಲೇ ಬೀಜ ಬಿತ್ತನೆ ಮಾಡಿ ಮಳೆಗೆ ಕಾಯುತ್ತಿದ್ದಾರೆ. ಆದರೆ ಬೀಜ ಬಿತ್ತನೆ ನಂತರ ಕಳೆದ ಒಂದೂವರೆ ತಿಂಗಳಿನಿಂದ ಮಳೆ ಬಾರದೆ ಗಿಡಗಳು ಬಾಡುತ್ತಿವೆ. ಗಿಡಗಳು ಹೂ ಬಿಟ್ಟಿದ್ದು, ನೆಲದಲ್ಲಿ ಹೂಡು ಹಿಡಿಯುವ ವೇಳೆ ಮಳೆ ಕೈ ಕೊಟ್ಟಿದೆ. ಬಹಳಷ್ಟು ಹೊಲಗಳಲ್ಲಿ ಗಿಡಗಳು ಒಣಗಿದ್ದು ಈಗ ಮಳೆ ಬಂದರೂ ಪ್ರಯೋಜನವಿಲ್ಲ ಎನ್ನುತ್ತಾರೆ ರೈತರು.
ದುಬಾರಿ ಬೀಜ ನೆಲಕ್ಕೆ ಸುರಿದು ರೈತರು ಮತ್ತಷ್ಟು ನಷ್ಟದಲ್ಲಿ ಮುಳುಗಿದ್ದಾರೆ. ಕೆಲವು ರೈತರು ಹೊಲಗಳನ್ನು ಬೇರೆ ರೈತರಿಂದ ಗುತ್ತಿಗೆ ಪಡೆದು ದುಪ್ಪಟ್ಟು ಹಣ ಖರ್ಚು ಮಾಡಿ ಬಾಣಲಿಯಿಂದ ಬೆಂಕಿಗೆ ಬೀಳುವ ಸ್ಥಿತಿ ರೈತರದ್ದಾಗಿದೆ ಎನ್ನುತ್ತಾರೆ ರೈತ ಅಜ್ಜೇಗೌಡ.
ತುಟ್ಟಿ ಬೀಜ ತಂದು ಬಿತ್ತನೆ ಮಾಡಿದ್ದು ಮಳೆ ಸಂಪೂರ್ಣ ಕೈ ಕೊಟ್ಟಿದೆ. ಮಳೆ ಬರುವ ಮಹದಾಸೆಯಿಂದ ಗಿಡಗಳಿಗೆ ಅರ್ತೆ ಹೊಡೆದು ಕಳೆ ತೆಗೆಸಿದ್ದೇವೆ. ಬೀಜದ ಜತೆ ಗೊಬ್ಬರ ಹಾಗೂ ಬೇಸಾಯಕ್ಕೆ ಸಾಕಷ್ಟು ಹಣ ಖರ್ಚಾಗಿದೆ. ಸದ್ಯ ಮಳೆ ಬಂದು ಬೀಜದ ಹಣವಾದರೂ ವಾಸಪ್ ಬಂದರೆ ಸಾಕು.ರಂಗನಾಥ್, ನುಲೆನೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.