ಗುಬ್ಬಿ: ತಾಲ್ಲೂಕಿನ ಕಸಬಾ ಹೋಬಳಿಯ ಕಕ್ಕೇನಹಳ್ಳಿ ಗ್ರಾಮದ ಬಸವರಾಜು ಮತ್ತು ರಂಗಪ್ಪ ಎಂಬುವವರಿಗೆ ಸೇರಿದ 30 ಕುರಿಗಳು ಭಾನುವಾರ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಸೇವಿಸಿ ಮೃತಪಟ್ಟಿವೆ. 50ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡಿವೆ.
ಅಪರಿಚಿತರು ಜಿ.ಹೊಸಹಳ್ಳಿ ಅರಣ್ಯದಂಚಿನಲ್ಲಿ ಮತ್ತು ರಸ್ತೆಯ ಬದಿ ಅವಧಿ ಮೀರಿದ ಚಕ್ಕುಲಿ, ಬಿಸ್ಕತ್, ಕುರ್ಕುರೆ, ನಿಪ್ಪಟ್ಟು, ಶಾವಿಗೆ, ದ್ರಾಕ್ಷಿಗೊಡಂಬಿ ಮುಂತಾದ ಆಹಾರ ಪದಾರ್ಥಗಳನ್ನು ಎಸೆದಿದ್ದರು. ಶನಿವಾರ ಸಂಜೆ ಮೇಯಿಸಲು ತೆರಳಿದ್ದಾಗ ಕುರಿಗಳು ಪದಾರ್ಥಗಳನ್ನು ತಿಂದಿವೆ. ಭಾನುವಾರ ಮುಂಜಾನೆ ಇದ್ದಕ್ಕಿದ್ದಂತೆ ಸತ್ತು ಬಿದ್ದಿವೆ. ಅಸ್ವಸ್ಥ ಕುರಿಗಳಿಗೆ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಲಾಯಿತು.
ಅರಣ್ಯ ಪ್ರದೇಶದಲ್ಲಿ ಅವಧಿ ಮೀರಿದ ಪದಾರ್ಥಗಳನ್ನು ಎಸೆದಿರುವವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಶ್ರೀನಿವಾಸ್ ಮತ್ತು ಕಂದಾಯ ಅಧಿಕಾರಿಗಳು ಪಶು ಇಲಾಖೆ ಪ್ರತಿ ಕುರಿಗೆ ₹ 5 ಸಾವಿರ ಪರಿಹಾರ ನೀಡಲಿದೆ ಎಂದರು.
ಪಶುವೈದ್ಯ ಮಲ್ಲೇಶಪ್ಪ, ಕಂದಾಯ ಇಲಾಖೆಯ ರಮೇಶ್, ನಾಗಭೂಷನ್, ಪಿಡಿಒ ಕಲಾ, ಗ್ರಾ.ಪಂ ಕಾರ್ಯದರ್ಶಿ ಸಿದ್ದರಾಮಣ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.