ADVERTISEMENT

ಗುಬ್ಬಿ ಆಸ್ಪತ್ರೆಯಲ್ಲಿ ಪ್ರಸೂತಿಗೂ ಪರದಾಟ

ಆಸ್ಪತ್ರೆಯಲ್ಲಿ ಹಳೆ ಯಂತ್ರಗಳು : ಖಾಸಗಿ ಪ್ರಯೋಗಾಲಯಗಳತ್ತ ರೋಗಿಗಳು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 16:54 IST
Last Updated 4 ಏಪ್ರಿಲ್ 2020, 16:54 IST
ಅನಿಲ್ ಕುಮಾರ್
ಅನಿಲ್ ಕುಮಾರ್   

ಗುಬ್ಬಿ: ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಗತ್ಯ ಸೌಕರ್ಯಗಳ ಕೊರತೆಯದೆ. ತಾಲ್ಲೂಕಿನ ಬಡಕುಟುಂಬಗಳು ಜಿಲ್ಲಾ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಯ ಮೊರೆ ಹೋಗಿ ಸಾವಿರಾರು ರೂಪಾಯಿಗಳನ್ನು ಚಿಕಿತ್ಸೆಗಾಗಿ ಭರಿಸಬೇಕಿದೆ.

ಈಗ ಈ ಆಸ್ಪತ್ರೆಗೆ ತಿಂಗಳಿಗೆ ಗರ್ಭಿಣಿಯರು ಮತ್ತು ಬಾಣಂತಿಯರು ಆರೋಗ್ಯ ತಪಾಸಣೆ ಮತ್ತು ಬಾಣಂತನಕ್ಕಾಗಿ ಬರುತ್ತಿದ್ದಾರೆ. ಆದರೆ, ಗುಣಮಟ್ಟದ ಚಿಕಿತ್ಸೆ ಸಿಗುತ್ತಿಲ್ಲ ಎಂಬುದು ಅವರ ದೂರಾಗಿದೆ. ಪ್ರಸೂತಿ ತಜ್ಞರನ್ನು ನೇಮಿಸಬೇಕು. ಪ್ರಸೂತಿಗಾಗಿ ಪ್ರತ್ಯೇಕ ಕಟ್ಟಡ ನಿರ್ಮಿಸಿಕೊಡಬೇಕು ಎಂಬುದು ಅವರ ಒತ್ತಾಯವಾಗಿದೆ.

ಪ್ರಯೋಗಾಲಯದಲ್ಲಿ ಕೇವಲ ಪ್ರಾಥಮಿಕ ಹಂತದ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಬಾಣಂತಿಯರು ಹಾಗೂ ನವಜಾತ ಶಿಶುಗಳ ತುರ್ತು ಪರೀಕ್ಷೆಗೆ ಖಾಸಗಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ.

ADVERTISEMENT

ರಾಷ್ಟ್ರೀಯ ಹೆದ್ದಾರಿ 206ರಲ್ಲಿ ನಿತ್ಯ ಅಪಘಾತಗಳು ಘಟಿಸುತ್ತವೆ. ತುರ್ತು ಸಂದರ್ಭಗಳಲ್ಲಿ ಹಳೇ ಮಾದರಿ ಕ್ಷ-ಕಿರಣ ಯಂತ್ರಗಳಲ್ಲೇ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ. ಈ ಹಳೆಯ ಯಂತ್ರಗಳಿಂದ ರೋಗಿಗಳು ವಿಮುಖರಾಗಿ ಖಾಸಗಿ ಪ್ರಯೋಗಾಲಯಗಳಿಗೆ ಹೋಗುತ್ತಿದ್ದಾರೆ.

ಆಸ್ಪತ್ರೆಗೆ ಕೋವಿಡ್-19 ಕಾಯಿಲೆ ಆತಂಕದಿಂದ ಬರುವ ರೋಗಿಗಳಿಗೆ ಜ್ವರ ಚಿಕಿತ್ಸಾ ವಿಭಾಗ, ಕೆಮ್ಮು, ನೆಗಡಿ, ಆಯಾಸ, ಉಸಿರಾಟದ ತೊಂದರೆ ಹಾಗೂ ಸಾಮಾನ್ಯ ರೋಗಿಗಳ ತಪಾಸಣೆ ಮತ್ತು ಚಿಕಿತ್ಸೆಗಾಗಿ ಪ್ರತ್ಯೇಕ ಕೊಠಡಿಗಳನ್ನು ಮೀಸಲಿಡಲಾಗಿದೆ. ಪ್ರತ್ಯೇಕ ಕಟ್ಟಡದಲ್ಲಿ ಐಸೋಲೇಷನ್ ವಾರ್ಡ್‍ಗಳನ್ನು ರೂಪಿಸಿ, ಎರಡು ವಿಶೇಷ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ.

ವೈದ್ಯರು ಗೈರು: ತಾಲ್ಲೂಕಿನಲ್ಲಿ 20 ಆರೋಗ್ಯ ಕೇಂದ್ರಗಳಿವೆ. ಎಂ.ಎನ್.ಕೋಟೆಯಲ್ಲಿ ಒಂದು ಸಮುದಾಯ ಆರೋಗ್ಯ ಕೇಂದ್ರವಿದೆ. ಅನೇಕ ಆರೋಗ್ಯ ಕೇಂದ್ರಗಳಲ್ಲಿ ಕಾಯಂ ವೈದ್ಯರಿಲ್ಲ. ಕೆಲವು ಊರುಗಳಲ್ಲಿ ಪ್ರಾಥಮಿಕ ಆರೊಗ್ಯ ಕೇಂದ್ರಗಳಿದ್ದರೂ ವೈದ್ಯರು ಕರ್ತವ್ಯಕ್ಕೆ ಸರಿಯಾದ ಸಮಯಕ್ಕೆ ಬರುವುದಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

*

‌ಶಾಸಕರ ಭವನ ಸೇರಿದ ಎಕ್ಸರೆ ಯಂತ್ರ

ಡಿ ಗ್ರೂಪ್ ಸಿಬ್ಬಂದಿಯ ಕೊರತೆ ಇದೆ. 8 ಮಂದಿ ಮಾತ್ರ ಕಾಯಂ ಸಿಬ್ಬಂದಿ ಇದ್ದಾರೆ. 17 ಮಂದಿ ಹೊರಗುತ್ತಿಗೆಯ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆಯಿಂದ ಡಿಜಿಟಲ್ ಎಕ್ಸರೆ ಯಂತ್ರವನ್ನು ನೀಡಲಾಗಿತ್ತು. ಆದರೆ ಅದನ್ನು ಬೆಂಗಳೂರಿನ ಶಾಸಕರ ಭವನಕ್ಕೆ ತೆಗೆದುಕೊಂಡು ಹೋಗಲಾಗಿದೆ. ಮುಂದಿನ ದಿನಗಳಲ್ಲಿ ಯಂತ್ರ ನೀಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ಒಂದು ವರ್ಷ ಕಳೆದರೂ ನೀಡಿಲ್ಲ.

*

ಹೆರಿಗೆಗಾಗಿ ಹಳ್ಳಿಗಳಿಂದ ಹೆಚ್ಚು ಗರ್ಭಿಣಿಯರು ಬರುತ್ತಾರೆ. ಪ್ರತ್ಯೇಕ ಕಟ್ಟಡ ನಿರ್ಮಿಣಿ, ಬಾಣಂತನಕ್ಕೆ ವ್ಯವಸ್ಥೆ ಮಾಡಬೇಕು. ಪ್ರಸೂತಿ ತಜ್ಞರನ್ನು ನೇಮಿಸಬೇಕು

ಅನಿಲ್‌ ಕುಮಾರ್‌, ಸ್ಥಳೀಯ

*

ಸಣ್ಣ ಪುಟ್ಟ ತುರ್ತು ಚಿಕಿತ್ಸೆಗಾಗಿಯೂ ಜಿಲ್ಲಾ ಆಸ್ಪತ್ರೆಗೆ ಕಳುಹಿಸುತ್ತಾರೆ. ಹಣ ನೀಡದಿದ್ದರೆ ಕೆಲವು ವೈದ್ಯರು ಮತ್ತು ನರ್ಸ್‌ ಸರಿಯಾಗಿ ಸ್ಪಂದಿಸುವುದಿಲ್ಲ.

ಹೊನ್ನಗಿರಿಗೌಡ, ಸ್ಥಳೀಯ ಮುಖಂಡ

*

ಇರುವ ಸೌಲಭ್ಯಗಳಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದೇವೆ. ಎರಡು ವೆಂಟಿಲೇಟರ್‌ ಮತ್ತು ಡಿಜಿಟಲ್‌ ಎಕ್ಸರೆ ಯಂತ್ರ ತರಿಸಲು ಯತ್ನಿಸುತ್ತಿದ್ದೇವೆ

ಡಾ.ದಿವಾಕರ್‌, ವೈದ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.