ತುಮಕೂರು: ಜಿಲ್ಲಾ ಆಸ್ಪತ್ರೆಯಲ್ಲಿ ತುಮಕೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಕ್ರಪಾದ ಸಮಸ್ಯೆಯಿಂದ ಜನಿಸಿದ ಮಕ್ಕಳಿಗೆ ಕೀಲು ಮತ್ತು ಮೂಳೆ ತಜ್ಞ ಡಾ.ಬಿ.ಎಂ.ಲೋಹಿತ್ ಮತ್ತು ತಂಡದವರು ಪ್ರತಿ ಗುರುವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರ ವರೆಗೆ ಉಚಿತವಾಗಿ ಚಿಕಿತ್ಸೆ ನೀಡಲಿದ್ದಾರೆ.
ಚಿಕಿತ್ಸೆ ಪಡೆದ ಮಕ್ಕಳಿಗೆ ಗೋಪಿ ಬೂಸನಾಥನ್ ಅವರು ಉಚಿತವಾಗಿ ಶೂಗಳನ್ನು ನೀಡುವರು. ಪೋಷಕರು ಈ ಸೇವೆ ಪಡೆಯಲು 6364303131 ಕರೆ ಮಾಡಬಹುದು.
ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿರುವಾಗಲೇ ಮಗುವಿಗೆ ವಕ್ರಪಾದ ಅಥವಾ ಕ್ಲಬ್ಫೂಟ್ ಉಂಟಾಗಿರುತ್ತದೆ. ಹುಟ್ಟಿದ 500 ಮಕ್ಕಳಲ್ಲಿ ಒಬ್ಬರಿಗೆ ಈ ವಕ್ರಪಾದ ಸಮಸ್ಯೆ ಕಾಣಬಹುದು. ಭಾರತದಲ್ಲಿ ಪ್ರತಿ ವರ್ಷ 50 ಸಾವಿರ ಮಕ್ಕಳು ಈ ಸಮಸ್ಯೆಯೊಂದಿಗೆ ಜನಿಸುತ್ತಾರೆ. ವಕ್ರಪಾದ ಉಂಟಾದವರಲ್ಲಿ ಮೊಣಕಾಲಿನಿಂದ ಕೆಳಗೆ ಪಾದಗಳನ್ನು ಒಳಗೊಂಡು ಒಳ ಭಾಗಕ್ಕೆ ತಿರುಚಿಕೊಂಡಂತಿರುತ್ತವೆ. ನಡೆಯಲು ಹಾಗೂ ಸಾಮಾನ್ಯ ಚಟುವಟಿಕೆಗಳನ್ನು ನಡೆಸಲು ಕಷ್ಟವಾಗುತ್ತದೆ. ವಕ್ರಪಾದದಿಂದ ನೋವು ಅಥವಾ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.