ವೈ.ಎನ್.ಹೊಸಕೋಟೆ: ಸತತವಾಗಿ ಸುರಿಯುತ್ತಿರುವ ಉಬ್ಬೆ ಮಳೆಯಿಂದ ಬೆಳೆನಷ್ಟ ಅನುಭವಿಸುತ್ತಿರುವ ಬಯಲುಸೀಮೆಯ ರೈತರು ತಬ್ಬಿಬ್ಬಾಗಿದ್ದಾರೆ.
ಶೇಂಗಾಬಳ್ಳಿ ನೆಲದಲ್ಲೇ ಕೊಳೆಯುತ್ತಿದ್ದು, ದನಕರುಗಳಿಗೆ ಮೇಯಲು ಸಾಧ್ಯವಾಗದೆ ತಿಪ್ಪೆಗೆ ಹಾಕುವುದು ಅನಿವಾರ್ಯವಾಗಿದೆ.
‘ತಡವಾಗಿ ಬಿತ್ತನೆ ಮಾಡಿರುವ ಹೊಲಗಳಲ್ಲಿ ಶೇಂಗಾ ಗಿಡ ಹುಲುಸಾಗಿ ಬೆಳೆದಿದ್ದು, ಇಳುವರಿ ಮಾತ್ರ ಕಡಿಮೆ ಇದೆ. ಗಿಡಗಳಲ್ಲಿ ಅಲ್ಪಸ್ವಲ್ಪ ಇರುವ ಶೇಂಗಾ ಈಗಿನ ಮಳೆಯಿಂದಾಗಿ ಕೈಗೆ ಸಿಗುವ ಖಾತರಿ ಇಲ್ಲ’ ಎಂದು ರೈತ ಓಬಳೇಶ ಮತ್ತು ತಿಪ್ಪೇಸ್ವಾಮಿ ಆತಂಕ ವ್ಯಕ್ತಪಡಿಸುತ್ತಾರೆ.
ಇದಲ್ಲದೆ ಕೊಳವೆಬಾವಿಗಳ ನೀರಿನ ಸಹಾಯದಿಂದ ಬೆಳೆದಿರುವ ಟೊಮೆಟೊ, ಹತ್ತಿ, ಮೆಣಸಿನಕಾಯಿ ಇತ್ಯಾದಿ ಬೆಳೆಗಳನ್ನು ಮಳೆ ಕಾರಣದಿಂದ ಬಿಡಿಸಲಾಗುತ್ತಿಲ್ಲ.
‘ಟೊಮೆಟೊ ಗಿಡಗಳಲ್ಲಿ ಹಣ್ಣಾಗಿ ಕೊಳೆಯುತ್ತಿದೆ. ಹತ್ತಿ ಮೊಳಕೆಯೊಡೆದು ನಾರು ಕೊಳೆಯುತ್ತಿದೆ. ಫಸಲು ಕೈಗೆ ಸಿಗುತ್ತದೆ ಎಂಬ ಖುಷಿಯಲ್ಲಿದ್ದ ನಮಗೆ ಉಬ್ಬೆಮಳೆ ನಿರಾಸೆ ಮೂಡಿಸಿ ಸಂಕಷ್ಟ ತಂದೊಡ್ಡಿದೆ’ ಎನ್ನುತ್ತಾರೆ ಗ್ರಾಮದ ರೈತರಾದ ಎಚ್.ಕೆ.ಶ್ರೀನಿವಾಸ, ಹನುಮಂತರಾಯ ಮತ್ತು ಜಗನ್ನಾಥ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.