ತುಮಕೂರು: ನಗರದ ನೀರಿನ ಸಂಗ್ರಹಗಾರ ಆಗಿರುವ ಹೆಬ್ಬಾಕ ಕೆರೆ ತುಂಬಿಸಲು ಬುಧವಾರದಿಂದ ನೀರು ಹರಿಸಲಾಗುತ್ತಿದೆ.
ಜನಪ್ರತಿನಿಧಿಗಳು ಕೆರೆ ದಡದಲ್ಲಿ ಪೂಜೆ ನೆರವೇರಿಸುವ ಮೂಲಕ ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ಬುಗಡನಹಳ್ಳಿ ಜತೆಗೆ ಹೆಬ್ಬಾಕ ಕೆರೆಯೂ ಸಹ ಮಹಾನಗರ ಪಾಲಿಕೆಗೆ ನೀರು ಹರಿಸುವ ಮೂಲವಾಗಿದೆ. ನಾಲೆಯಿಂದ 50 ಕ್ಯೂಸೆಕ್ ನೀರು ಹರಿಯುತ್ತಿದೆ. ಅದರಲ್ಲಿನ 20 ಕ್ಯೂಸೆಕ್ ನೀರು ಹೆಬ್ಬಾಕ ಕೆರೆಗೆ ಹರಿಸುತ್ತಿದ್ದೇವೆ. ಉಳಿದ ನೀರು ಕುಣಿಗಲ್ ಕಡೆ ಹರಿಯುತ್ತಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ತಿಳಿಸಿದರು.
ಕೆರೆಯ ನೀರಿನ ಸಂಗ್ರಹ ಸಾಮರ್ಥ್ಯ 190 ಎಂಸಿಎಫ್ಟಿ ಇದೆ. ಸದ್ಯ ಹರಿಯುತ್ತಿರುವ ಪ್ರಮಾಣದಲ್ಲಿಯೇ 90 ದಿನಗಳ ಕಾಲ ನೀರು ಬಂದರೆ ಕೆರೆ ಭರ್ತಿ ಆಗಲಿದೆ. ಅಲ್ಲಿ ಸಂಗ್ರಹವಾಗುವ ನೀರು ಗುರುತ್ವಾಕರ್ಷಣ ಬಲದೊಂದಿಗೆ ಕೊಳವೆ ಮೂಲಕ ಪುನಃ ಬುಗಡನಹಳ್ಳಿ ಕೆರೆಗೆ ಹರಿಯಲಿದೆ. ಅಲ್ಲಿಂದ ನಗರಕ್ಕೆ ನೀರು ಸರಬರಾಜು ಮಾಡಬಹುದಾಗಿದೆ ಎಂದು ಅವರು ಹೇಳಿದರು.
ಈ ಕೆರೆ ಭರ್ತಿಯಾದರೆ ಡಿಸೆಂಬರ್ ನಂತರದಲ್ಲಿ ಮೂರು ತಿಂಗಳ ಕಾಲ ನಗರಕ್ಕೆ ನೀರು ಪೂರೈಕೆ ಮಾಡಬಹುದಾಗಿದೆ. ಇದರಿಂದಾಗಿ ಟ್ಯಾಂಕರ್ ನೀರಿನ ಮೇಲಿನ ಅವಲಂಬನೆ ತಪ್ಪಲಿದೆ ಎಂದು ಎಂಜಿನಿಯರ್ ವಸಂತ್ ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.