ತುಮಕೂರು: ತಾಲ್ಲೂಕಿನ ಹೆಬ್ಬೂರು ಕೆರೆಯನ್ನು ಒತ್ತುವರಿ ಮಾಡಿಕೊಂಡು ಖಾಸಗಿ ಲೇಔಟ್ಗೆ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಹೆಬ್ಬೂರು ಗ್ರಾಮದ ಸರ್ವೆ ನಂ 158ರಲ್ಲಿರುವ ಕೆರೆಗೆ ಸೇರಿದ 35 ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಂಡು ರಸ್ತೆ ನಿರ್ಮಿಸಲಾಗುತ್ತಿದೆ. ಆದರೆ ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ತೆರವುಮಾಡಿಸಿ, ಕೆರೆ ಉಳಿಸುವ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಲಾಗಿದೆ.
ಕೆರೆ ಒತ್ತುವರಿ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿತ್ತು. ಆ ಪತ್ರ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ವರ್ಗಾವಣೆಯಾಗಿತ್ತು. ಅಗತ್ಯ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಹಿರಿಯ ಅಧಿಕಾರಿಗಳು ಸೂಚಿಸಿದ್ದರೂ ಕ್ರಮ ವಹಿಸಿಲ್ಲ. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಕಚೇರಿ, ಸಣ್ಣ ನೀರಾವರಿ ಇಲಾಖೆ, ತಹಶೀಲ್ದಾರ್ ಕಚೇರಿ ನಡುವೆ ಈ ಅರ್ಜಿ ಓಡಾಡುತ್ತಿದೆ. ಈ ಕೆರೆಯಲ್ಲಿ 35 ಗುಂಟೆ ಜಾಗ ರಸ್ತೆಗಾಗಿ ಒತ್ತುವರಿ ಮಾಡಲಾಗಿದೆ ಎಂದು ಸರ್ವೆ ಅಧಿಕಾರಿಗಳು ತಹಶೀಲ್ದಾರ್ಗೆ ವರದಿ ನೀಡಿದ್ದಾರೆ. ಗ್ರಾಮಲೆಕ್ಕಿಗ, ಕಂದಾಯ ಅಧಿಕಾರಿ ಸಹ ಕೆರೆ ಅಂಗಳವನ್ನು ರಸ್ತೆಗಾಗಿ ಒತ್ತುವರಿ ಮಾಡಿರುವುದನ್ನು ಲಿಖಿತವಾಗಿ ದೃಢಪಡಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ
ಎಂದು ಬೆಳಗುಂಬ ಗ್ರಾ.ಪಂ ಮಾಜಿ ಸದಸ್ಯ ಬಿ.ಎಸ್.ವೆಂಕಟೇಶ್ ದೂರಿದ್ದಾರೆ.
ಕಳೆದ ಒಂದುವರೆ ವರ್ಷದಿಂದಲೂ ಕ್ರಮ ಕೈಗೊಂಡಿಲ್ಲ. ಯಾರ ಒತ್ತಡಕ್ಕೆ ಸಿಲುಕಿ ಕ್ರಮ ತೆಗೆದುಕೊಂಡಿಲ್ಲ ಎಂಬು
ದನ್ನು ತಿಳಿಸುವಂತೆ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.