ತುಮಕೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಅಲ್ಪಸಂಖ್ಯಾತರ ತುಷ್ಟೀಕರಣ ಸರ್ಕಾರದ ಗುರಿಯಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಟೀಕಿಸಿದ್ದಾರೆ.
ಬೀದರ್ನಲ್ಲಿ ಜನಿವಾರ ಧರಿಸಿದ್ದ ವಿದ್ಯಾರ್ಥಿಗೆ ಸಿಇಟಿ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಶಿವಮೊಗ್ಗದಲ್ಲಿ ವಿದ್ಯಾರ್ಥಿಗೆ ಜನಿವಾರ ಕಿತ್ತೆಸೆಯುವಂತೆ ಹೇಳಿ ಅಧಿಕಾರಿಗಳು ದರ್ಪ ಮೆರೆದಿದ್ದಾರೆ. ವಿದ್ಯಾರ್ಥಿಯ ಭವಿಷ್ಯಕ್ಕೆ ಕಲ್ಲು ಹಾಕಿದ್ದಾರೆ. ಇಂತಹ ಬೌದ್ಧಿಕ ವಿಕೃತಿ, ಮನುಷ್ಯತ್ವ ಇಲ್ಲದ ನಡೆ ಮತ್ತೊಂದಿಲ್ಲ. ಇದು ಕಾಂಗ್ರೆಸ್ನ ಹೀನ ಮನಃಸ್ಥಿತಿಯ ಮುಖವಾಡ ಪ್ರದರ್ಶಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪರೀಕ್ಷೆ, ಸಂದರ್ಶನದ ವೇಳೆ ಕೆಲ ವಸ್ತುಗಳಿಗೆ ನಿರ್ಬಂಧ ವಿಧಿಸಿದೆ. ಜನಿವಾರ ತೊಡುವುದು ಭಾರತೀಯ ಸಮುದಾಯದ ಆಚಾರ–ವಿಚಾರಕ್ಕೆ ಸಂಬಂಧಿಸಿದೆ. ಪರೀಕ್ಷೆಯ ಮೇಲೆ ಜನಿವಾರ ಯಾವ ಪ್ರಭಾವ ಬೀರುತ್ತದೆ? ಇದಕ್ಕೆ ಸಂಬಂಧಿಸಿದ ಸಚಿವರು, ಸರ್ಕಾರ ಉತ್ತರಿಸಬೇಕು ಎಂದಿದ್ದಾರೆ.
ಸರ್ಕಾರ ಧಾರ್ಮಿಕ ಭಾವನೆ ಕೆರಳಿಸುವ ಚಾಳಿ ಮುಂದುವರಿಸಿದರೆ ಜನ ಬೀದಿಗಿಳಿದು ಪ್ರತಿಭಟಿಸುತ್ತಾರೆ. ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು. ಅನ್ಯಾಯಕ್ಕೆ ಒಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.