ADVERTISEMENT

ಆಸ್ಪತ್ರೆ ಕಸ ವಿಲೇವಾರಿ: ಹಣಕ್ಕೆ ಬೇಡಿಕೆ

ಆವರಣದಲ್ಲಿ ಕೊಳೆಯುತ್ತಿರುವ ಕಸ; ಡೀಸೆಲ್‌ ಬೇಡ ಹಣ ಕೊಡಿ–ನಗರಸಭೆ ಸಿಬ್ಬಂದಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 2:42 IST
Last Updated 19 ಜನವರಿ 2021, 2:42 IST
ಶಿರಾದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ವಿಲೇವಾರಿಯಾಗದೆ ಕೊಳೆತು ನಾರುತ್ತಿರುವ ಕಸ
ಶಿರಾದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ವಿಲೇವಾರಿಯಾಗದೆ ಕೊಳೆತು ನಾರುತ್ತಿರುವ ಕಸ   

ಶಿರಾ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂಗ್ರಹವಾಗಿರುವ ಸಾಮಾನ್ಯ ಕಸ ವಿಲೇವಾರಿಯಾಗದೆ ಕೊಳೆತು ಗಬ್ಬುನಾರುತ್ತಿದೆ.

ಆಸ್ಪತ್ರೆಯಲ್ಲಿ ಸಂಗ್ರಹವಾಗುವ ರಕ್ತ, ಸೂಜಿ, ಸಿರೆಂಜ್ ಸೇರಿದ ಕಸವನ್ನು ಗುತ್ತಿಗೆ ಪಡೆದವರು ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ ಕಸ, ಎಲೆ, ರೋಗಿಗಳು ತರುವ ಉಳಿದ ಊಟ, ಕಾಗದ, ಊಟವನ್ನು ಪ್ಯಾಕಿಂಗ್ ಮಾಡಿರುವ ಕಾಗದದ ಪಟ್ಟಣ, ಪ್ಲಾಸ್ಟಿಕ್ ಸೇರಿದಂತೆ ಸಾಮಾನ್ಯ ಕಸ ಪ್ರತಿನಿತ್ಯ 100ರಿಂದ 150 ಕೆ.ಜಿ ಸಂಗ್ರಹವಾಗುತ್ತದೆ. ಅದನ್ನು ಆಸ್ಪತ್ರೆ ಸಿಬ್ಬಂದಿ ಪ್ಲಾಸ್ಟಿಕ್ ಕವರ್‌ನಲ್ಲಿ ಸಂಗ್ರಹಿಸಿ ಇಟ್ಟರು ಸಹ ತೆಗೆದುಕೊಂಡು ಹೋಗಲು ನಗರಸಭೆ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ.

ಹಣದ ಬೇಡಿಕೆ: ‘ಕಸ ತೆಗೆದುಕೊಂಡು ಹೋಗಲು ನಗರಸಭೆ ಸಿಬ್ಬಂದಿ ಹಣದ ಬೇಡಿಕೆ ಇಟ್ಟಿದ್ದಾರೆ ಒಂದು ಲೋಡು ಕಸ ತೆಗೆದುಕೊಂಡು ಹೋಗಲು ಸಾವಿರ ರೂಪಾಯಿ ಕೊಡುವಂತೆ ಒತ್ತಾಯಿಸುತ್ತಿದ್ದಾರೆ. ಡೀಸೆಲ್ ಹಾಕಿಸುತ್ತೇವೆ ತೆಗೆದುಕೊಂಡು ಹೋಗುವಂತೆ ಹೇಳಿದರು ಸಹ ಕೇಳುವುದಿಲ್ಲ, ಹಣಕ್ಕಾಗಿ ಪೀಡಿಸುತ್ತಾರೆ’ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳುತ್ತಾರೆ.

ADVERTISEMENT

ಕಸದ ವಿಲೇವಾರಿ ಮಾಡುವಂತೆ ಹಲವಾರು ಬಾರಿ ನಗರಸಭೆಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಆದರೂ ಸಹ ಯಾರು ಸ್ಪಂದಿಸುತ್ತಿಲ್ಲ. ಕಸದಿಂದಾಗಿ ರೋಗಿಗಳು ಮತ್ತು ಆಸ್ಪತ್ರೆಗೆ ಬರುವವರಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ವೈದ್ಯಾಧಿಕಾರಿ, ತಹಶೀಲ್ದಾರ್, ನಗರಸಭೆ ಪೌರಾಯುಕ್ತರುಅವರಿಗೆ ಪತ್ರ ಬರೆದು ಅವರ ಗಮನಕ್ಕೆ ತಂದು ತಿಂಗಳು ಕಳೆದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಶಾಸಕರು ಸ್ವಂತ ವೈದ್ಯರಾಗಿದ್ದರೂ ಸಮಸ್ಯೆ ಬಗೆಹರಿಸಲುಮುಂದಾಗಿಲ್ಲ ಎಂದು ನಾಗರಕರು ದೂರುತ್ತಾರೆ.

‘ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತೆ ಇಲ್ಲದಂತಾಗಿ ಕಸವನ್ನು ಹಂದಿಗಳು ಎಳೆಯುತ್ತಿರುವುದನ್ನು ಗಮನಿಸಿದರೆ ಇದು ಆರೋಗ್ಯ ಕಾಪಾಡುವುದಕ್ಕಿಂತ ಅನಾರೋಗ್ಯವನ್ನು ಹರಡುವ ತಾಣವಾಗುತ್ತಿದೆ. ಶಾಸಕರು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ಸಾರ್ವಜನಿಕರ ಆಗ್ರಹಿಸಿದರು.

ಹಣ ಕೇಳುತ್ತಾರೆ
ಆಸ್ಪತ್ರೆಯಲ್ಲಿ ಸಂಗ್ರಹವಾಗಿರುವ ಸಾಮಾನ್ಯ ಕಸ ವಿಲೇವಾರಿ ಮಾಡುವಂತೆ ಹಲವಾರು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಕಸ ತೆಗೆದುಕೊಂಡು ಹೋಗಲು ನಗರಸಭೆ ಸಿಬ್ಬಂದಿ ಹಣ ಕೇಳುತ್ತಾರೆ. ಈ ಬಗ್ಗೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
-ಡಾ.ಶ್ರೀನಾಥ್, ಆಡಳಿತ ವೈದ್ಯಾಧಿಕಾರಿ, ಸಾರ್ವಜನಿಕ ಆಸ್ಪತ್ರೆ, ಶಿರಾ

ಕ್ರಮದ ಭರವಸೆ
ನಗರಸಭೆಯ ಯಾರು ಹಣ ಕೇಳಿದ್ದಾರೆ ಎಂದು ಸಿಬ್ಬಂದಿಯ ಹೆಸರು ಹೇಳಿದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು, ಆಸ್ಪತ್ರೆಯಲ್ಲಿ ಸಂಗ್ರಹವಾಗಿರುವ ಸಾಮಾನ್ಯ ಕಸ ವಿಲೇವಾರಿ ಮಾಡುವಂತೆ ಸಿಬ್ಬಂದಿ ಸೂಚಿಸಲಾಗಿದೆ.
-ಪರಮೇಶ್ವರಪ್ಪ, ಪೌರಾಯುಕ್ತರು, ನಗರಸಭೆ, ಶಿರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.