ADVERTISEMENT

ಹೊತ್ತಿ ಉರಿಯುವ ಗುಡ್ಡಗಳು: ಸಾರ್ವಜನಿಕರಲ್ಲಿ ಮೂಡದ ಜಾಗೃತಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 6:06 IST
Last Updated 7 ಫೆಬ್ರುವರಿ 2026, 6:06 IST
ಹುಳಿಯಾರು ಹೋಬಳಿ ಸೋಮನಹಳ್ಳಿ ಹಾಗೂ ಗುರುವಾಪುರ ಗ್ರಾಮಗಳ ಮಧ್ಯೆ ಇರುವ ಅಣ್ಣ ತಮ್ಮ ಗುಡ್ಡಕ್ಕೆ ಬೆಂಕಿ ಬಿದ್ದಿರುವುದು
ಹುಳಿಯಾರು ಹೋಬಳಿ ಸೋಮನಹಳ್ಳಿ ಹಾಗೂ ಗುರುವಾಪುರ ಗ್ರಾಮಗಳ ಮಧ್ಯೆ ಇರುವ ಅಣ್ಣ ತಮ್ಮ ಗುಡ್ಡಕ್ಕೆ ಬೆಂಕಿ ಬಿದ್ದಿರುವುದು   

ಹುಳಿಯಾರು: ಹೋಬಳಿ ವ್ಯಾಪ್ತಿಯಲ್ಲಿ ಬಹುತೇಕ ಗುಡ್ಡಗಳು ಕಳೆದೊಂದು ವಾರದಿಂದ ಹೊತ್ತಿ ಉರಿಯುತ್ತಿದ್ದು, ಗುಡ್ಡಗಳಿಗೆ ಬೆಂಕಿಯಿಡುವ ಪ್ರವೃತ್ತಿಯಿಂದ ಉಂಟಾಗುವ ತೊಂದರೆಗಳ ಬಗ್ಗೆ ಸಾರ್ವಜನಿಕರಲ್ಲಿ ಇನ್ನೂ ಜಾಗೃತಿ ಮೂಡದಿರುವುದು ದುರಂತವಾಗಿದೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮದಲಿಂಗನ ಕಣಿವೆಯ ಗುಡ್ಡಗಳಿಂದ ಹಿಡಿದು ಬೋರನಕಣಿವೆ ಜಲಾಶಯ ಮಾರ್ಗವಾಗಿ ಹಿರಿಯೂರು ಹಾಗೂ ಹೊಸದುರ್ಗ ತಾಲ್ಲೂಕುಗಳ ಗಡಿ ಭಾಗದವರೆಗೆ ಗುಡ್ಡಗಳ ಸಾಲು ಇದೆ. ಈ ಮಾರ್ಗದಲ್ಲಿ ನೂರಾರು ಗುಡ್ಡಗಳಿದ್ದು ಪ್ರತಿ ವರ್ಷ ಬೇಸಿಗೆ ಬಂತೆಂದರೆ ಸಾಕು ಬೆಂಕಿಗೆ ಆಹುತಿಯಾಗುತ್ತಿವೆ.

ಸಣ್ಣ ಗುಡ್ಡಗಳಿಂದ ಹಿಡಿದು ದೊಡ್ಡ ಗಾತ್ರದ ಗುಡ್ಡಗಳಿಗೂ ಬೆಂಕಿ ಹಚ್ಚುತ್ತಿದ್ದಾರೆ. ಬೆಂಕಿಯಿಂದ ಸಾವಿರಾರು ಸಸ್ಯ ಪ್ರಬೇಧ, ನೂರಾರು ಸಣ್ಣ ಪುಟ್ಟ ಜಾತಿಯ ಕಾಡುಪ್ರಾಣಿ, ಸರಿಸೃಪಗಳು ಬೆಂದು ಹೋಗುತ್ತಿವೆ. ಅರಣ್ಯ ಇಲಾಖೆಯ ಮರಗಳು, ಪ್ರತಿ ವರ್ಷ ನೆಡುತ್ತಿರುವ ಸಸಿಗಳು ಬೆಂಕಿಯಲ್ಲಿ ನಲುಗಿ ಹೋಗುತ್ತಿವೆ. ಇನ್ನೂ ಬಾದೆ ಹುಲ್ಲುಗಾವಲು ಸಂಪೂರ್ಣ ಸುಟ್ಟು ಕರಕಲಾಗುತ್ತಿದೆ. 

ADVERTISEMENT

ಕಳೆದ ವಾರದಿಂದ ಹೋಬಳಿ ವ್ಯಾಪ್ತಿಯ ಗುರುವಾಪುರ, ಸೋಮನಹಳ್ಳಿ ಗ್ರಾಮಗಳ ಸಮೀಪದ ಅಣ್ಣ ತಮ್ಮ ಗುಡ್ಡ, ಸಂತೆ ಕಣಿವೆ ಸುತ್ತುವರಿದಿರುವ ಗುಡ್ಡಗಳು ಹೊತ್ತಿ ಉರಿಯುತ್ತಿವೆ. ಗುಡ್ಡಗಳಲ್ಲಿನ ಬಾದೆ ಹುಲ್ಲು ಮುಂಗಾರು ಮಳೆ ಬಿದ್ದ ತಕ್ಷಣ ಹುಲುಸಾಗಿ ಚಿಗುರುತ್ತದೆ ಎಂಬ ಮೂಢನಂಬಿಕೆಯಿಂದ ಕುರಿಗಾಹಿಗಳು ಬೆಂಕಿಯಿಡುತ್ತಾರೆ. ಗುಡ್ಡಗಳಿಗೆ ಶಿಕಾರಿಗೆ ಹೋಗುವ ಬೇಟೆಗಾರರು, ಗುಡ್ಡಗಳ ಪಕ್ಕ ರಸ್ತೆಯಿದ್ದು ಜನರು ಸಂಚರಿಸುವ ವೇಳೆ ಬೀಡಿ ಅಥವಾ ಸಿಗರೇಟ್‌ ಸೇದಲು ಹಚ್ಚಿದ ಬೆಂಕಿಕಟ್ಟಿಯನ್ನು ಹಾಗೆಯೇ ಎಸೆಯುವುದರಿಂದಲೂ ಅವಘಡಗಳು ಸಂಭವಿಸುತ್ತಿವೆ. ಇನ್ನೂ ಗುಡ್ಡಗಳ ಸಮೀಪ ಕೃಷಿ ಭೂಮಿ ಹೊಂದಿರುವ ರೈತರು ಜಮೀನು ಒತ್ತುವರಿಗೆ ಹಾಗೂ ಕಾಡುಪ್ರಾಣಿಗಳು ಜಮೀನಿಗೆ ಬಾರದಂತೆ ಹಾಕುವ ಬೆಂಕಿಯಿಂದಲೂ ಗುಡ್ಡಗಳಿಗೆ ಬೆಂಕಿ ಬೀಳುತ್ತದೆ ಎನ್ನಲಾಗುತ್ತಿದೆ.

ಬೆಂಕಿ ಇಡುವವರನ್ನು ಗುರುತಿಸಿ ಕಾನೂನಿನ ಪ್ರಕಾರ ಶಿಸ್ತುಕ್ರಮ ಜರುಗಿಸಿದರೆ ಪರಿಸ್ಥಿತಿ ಹತೋಟಿಗೆ ತರಬಹುದು ಎನ್ನುತ್ತಾರೆ ಪರಿಸರ ಪ್ರೇಮಿ ಮಹಮದ್‌ ಹುಸೇನ್‌.

ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದು ಬಿರು ಬಿಸಿಲು ಹಾಗೂ ಒಣಗಿದ ಹುಲ್ಲುಗಾವಲು ಬೆಂಕಿ ಹತೋಟಿಗೆ ಬರುತ್ತಿಲ್ಲ. ಮುನ್ನೆಚ್ಚರಿಕೆಯಾಗಿ ಗುಡ್ಡಗಳಲ್ಲಿ ಗುಡ್ಡಗಳಿಗೆ ಬೆಂಕಿ ಹರಡದಂತೆ ಬೆಂಕಿಲೈನ್‌ ಮಾಡಿದರೆ ಉಳಿದ ಗುಡ್ಡಗಳನ್ನು ಬೆಂಕಿಯಿಂದ ರಕ್ಷಿಸಬಹುದು ಎನ್ನುತ್ತಾರೆ ಪರಿಸರಾಸಕ್ತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.