ADVERTISEMENT

ತುಮಕೂರು: ಹೆಂಡತಿಯನ್ನು ಕೊಂದ ಗಂಡ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 1:32 IST
Last Updated 11 ಜೂನ್ 2021, 1:32 IST

ತುಮಕೂರು: ಗಂಡನೇ ಹೆಂಡತಿಯನ್ನು ಕೊಲೆ ಮಾಡಿರುವ ಘಟನೆ ನಗರದ ಸರಸ್ವತಿಪುರದಲ್ಲಿ ಬುಧವಾರ ರಾತ್ರಿ ನಡೆದಿದೆ.

ಪತ್ನಿ ಐಶ್ವರ್ಯ (19) ಅವರನ್ನು ಕೊಲೆಮಾಡಿ ಪತಿ ನಾಗರಾಜು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿ ನಡುವೆ ಬುಧವಾರ ತಡರಾತ್ರಿ ಜಗಳ ನಡೆದಿದ್ದು, ಗಲಾಟೆ ವಿಕೋಪಕ್ಕೆ ಹೋಗಿದೆ. ಪತ್ನಿಯನ್ನು ಹೊಡೆದು ಸಾಯಿಸಿ ನಂತರ ಮನೆಗೆ ಬೀಜ ಹಾಕಿಕೊಂಡು ತೆರಳಿದ್ದಾರೆ ಎನ್ನಲಾಗಿದೆ.

ಮಾರಿಯಮ್ಮನಪಾಳ್ಯದ ನಾಗರಾಜು ಜತೆಗೆ ಸಕಲೇಶಪುರ ತಾಲ್ಲೂಕು ಗೊಳಗೊಂಡೆ ಗ್ರಾಮದ ಐಶ್ವರ್ಯ ವಿವಾಹ 2019ರಲ್ಲಿ ನಡೆದಿತ್ತು. ತಾಲ್ಲೂಕಿನ ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್ ಬಳಿಯಪೆಟ್ರೋಲ್ ಬಂಕ್‌ನಲ್ಲಿ ಮ್ಯಾನೇಜರಾಗಿ ಕೆಲಸ ನಿರ್ವಹಿಸುತ್ತಿದ್ದು, ಸರಸ್ವತಿಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ADVERTISEMENT

ಮದುವೆ ಸಮಯದಲ್ಲಿ ಒಡವೆ ಹಾಗೂ ₹50 ಸಾವಿರ ನಗದು ಕೊಡಲಾಗಿತ್ತು. ನಂತರ ಹೆಚ್ಚಿನ ವರದಕ್ಷಿಣೆ ತರುವಂತೆ ಒತ್ತಾಯಿಸಿ ಐಶ್ವರ್ಯ ಜತೆಗೆ ಜಗಳ ಮಾಡುತ್ತಿದ್ದರು. ಕಾರು ತೆಗೆದುಕೊಳ್ಳಲು ₹1 ಲಕ್ಷ, ಬೈಕ್‌ ಖರೀದಿಗೆ ₹20 ಸಾವಿರ ನೀಡಲಾಗಿತ್ತು. ಗಂಡ ಹಾಗೂ ಅವರ ಮನೆಯವರು ಸೇರಿಕೊಂಡು ಮಗಳಿಗೆ ಕಿರುಕುಳ ನೀಡುತ್ತಿದ್ದರು ಎಂದು ಮೃತಳ ತಂದೆ ಉದಯ್ ದೂರು ನೀಡಿದ್ದಾರೆ.

ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.