ADVERTISEMENT

ಉದಾಸಿ ಶಿಫಾರಸು ಜಾರಿಯಾಗಲಿ: ಬಸವ ಜಯಮೃತ್ಯುಂಜಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 4:53 IST
Last Updated 10 ಫೆಬ್ರುವರಿ 2021, 4:53 IST
ಪಾದಯಾತ್ರೆಯಲ್ಲಿ ಲಿಂಗಾಯತ ಪಂಚಮಸಾಲಿ ಕೂಡಲಸಂಗಮ ಪೀಠದ ಬಸವ ಮೃತ್ಯುಂಜಯ ಸ್ವಾಮೀಜಿ
ಪಾದಯಾತ್ರೆಯಲ್ಲಿ ಲಿಂಗಾಯತ ಪಂಚಮಸಾಲಿ ಕೂಡಲಸಂಗಮ ಪೀಠದ ಬಸವ ಮೃತ್ಯುಂಜಯ ಸ್ವಾಮೀಜಿ   

ಶಿರಾ: ರಾಜ್ಯ ಹಿಂದುಳಿದ ವರ್ಗಗಳ‌ ಆಯೋಗದ ವರದಿ ಬರುವುದು ವಿಳಂಬವಾಗುವುದರಿಂದ 2009ರಲ್ಲಿ ಸಚಿವ
ರಾಗಿದ್ದ ಸಿ.ಎಂ.ಉದಾಸಿ ಅವರು ನೀಡಿರುವ ಶಿಫಾರಸನ್ನು ಅನುಷ್ಠಾನ ಮಾಡುವಂತೆ ಸರ್ಕಾರವನ್ನು‌ ಲಿಂಗಾಯತ
ಪಂಚಮಸಾಲಿ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ನಡೆಸುತ್ತಿರುವ ಪಾದಯಾತ್ರೆ ದೊಡ್ಡ ಆಲದಮರಕ್ಕೆ ಆಗಮಿಸಿದ್ದ ಸಮಯದಲ್ಲಿ ಮಾತನಾಡಿದರು.

2009ರಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದಾಗ ಪಂಚಮಸಾಲಿ ಸಮಾಜದವರು 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿದ್ದರು. ಆಗ ಸಚಿವ ಸಿ.ಎಂ.ಉದಾಸಿ ನೇತೃತ್ವದಲ್ಲಿ ಸಂಪುಟದ ಉಪಸಮಿತಿ ರಚಿಸಲಾಗಿತ್ತು. ಸಮಿತಿ ಪಂಚಮಸಾಲಿ ಸಮಾಜಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ 2ಎ ಮೀಸಲಾತಿ ನೀಡುವಂತೆ ಶಿಫಾರಸು ಮಾಡಿತ್ತು. ನಿಮ್ಮದೇ ಪಕ್ಷದ ಸಚಿವರು ಮಾಡಿದ್ದ ಶಿಫಾರಸನ್ನು ಈಗ ಸಂಪುಟ ಸಭೆಯಲ್ಲಿ ಅನುಮೋದಿಸಿದರೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದರು.

ADVERTISEMENT

ಪಾದಯಾತ್ರೆಯಿಂದಾಗಿ ಪಂಚಮ
ಸಾಲಿ ಸಮಾಜ ಜಾಗೃತವಾಗಿದೆ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಜಾಗೃತಿ ಸಭೆ ನಡೆಸಲಾಗುತ್ತಿದೆ. ತುಮಕೂರಿನಲ್ಲಿ ಫೆ 10ರಂದು ನಡೆಯುವ ನಿರ್ಣಾಯಕ ಸಭೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಸಲಹೆ, ಸೂಚನೆ ನೀಡಬೇಕು ಎಂದರು.

ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪ ಮಾತನಾಡಿ, ಗುರುಗಳು 27 ದಿನಗಳಿಂದ ಪಾದಯಾತ್ರೆ ಮಾಡುತ್ತಿದ್ದರೂ ಸರ್ಕಾರಕ್ಕೆ ಯಾವುದೇ ರೀತಿ ಕಾಳಜಿ ಇಲ್ಲ. ಗುರುಗಳ ಆರೋಗ್ಯ ತಪಾಸಣೆಗೆ ವೈದ್ಯರನ್ನೂ ಇದುವರೆಗೆ ಕಳುಹಿಸಿಲ್ಲ. ಗುರುಗಳ ಆರೋಗ್ಯದಲ್ಲಿ ಏನಾದರೂ ವ್ಯತ್ಯಾಸವಾದರೆ ಅದಕ್ಕೆ ಸರ್ಕಾರವೇ ಹೊಣೆಯಾಗುವುದು ಎಂದರು.

ಹರಿಹರ ಪೀಠದ ವಚನಾನಂದ ಸ್ವಾಮೀಜಿ, ಪಂಚಮಸಾಲಿ ಸಮಾಜದ ಯುವಘಟಕದ ರಾಜ್ಯಾಧ್ಯಕ್ಷ ಮಂಜುನಾಥ್ ನವಲಗುಂದ, ಪ್ರಧಾನ ಕಾರ್ಯದರ್ಶಿ ಕಿಚಿಡಿ ಕೋಟ್ರೇಶ್, ಶರಣಪ್ಪ ಬಸಪ್ಪ, ಎನ್.ಟಿ.ವೀರೇಶ್, ನಾಗರಾಜ್ ಕೊಟಗಿ, ಶಿವು ಗುಡ್ಡಾಪುರ್, ಶಿವಕುಮಾರ್ ಬೆಳಗೆರೆ, ರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.