ADVERTISEMENT

ಹುಣಸೆ ಕೃಷಿಗೆ ಹೆಚ್ಚಿದ ಒಲವು

ಮಧುಗಿರಿ ತಾಲ್ಲೂಕಿನಲ್ಲಿ ಮಳೆ ಮೂಡಿಸಿದ ಭರವಸೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 4:44 IST
Last Updated 31 ಅಕ್ಟೋಬರ್ 2020, 4:44 IST
ಮಧುಗಿರಿ ತಾಲ್ಲೂಕಿನ ಕಸಬಾ ವ್ಯಾಪ್ತಿಯ ಹುಣಸೆ ಮರದಲ್ಲಿ ಬಿಟ್ಟಿರುವ ಕಾಯಿ
ಮಧುಗಿರಿ ತಾಲ್ಲೂಕಿನ ಕಸಬಾ ವ್ಯಾಪ್ತಿಯ ಹುಣಸೆ ಮರದಲ್ಲಿ ಬಿಟ್ಟಿರುವ ಕಾಯಿ   

ಮಧುಗಿರಿ: ಸತತ ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ತಾಲ್ಲೂಕಿನಲ್ಲಿ ಈ ವರ್ಷ ಮಳೆ ಭರವಸೆ ಮೂಡಿಸಿದೆ. ಹಚ್ಚ ಹಸಿರಾಗಿ ಕಂಗೊಳಿಸುತ್ತಾ, ಮರದ ತುಂಬಾ ಕಾಯಿ, ಹೂವುಗಳನ್ನು ಹೊತ್ತು ನಿಂತಿರುವ ಹುಣಸೆ ಮರ ರೈತರಲ್ಲಿ ನಿರೀಕ್ಷೆಗಳನ್ನು ಗರಿಗೆದರಿಸಿದೆ. ಕೃಷಿ ಬಗ್ಗೆ ಒಲವು ಹೆಚ್ಚಿಸಿದೆ.

ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ರೈತರು ಹುಣಸೆ ಬೆಳೆದಿದ್ದಾರೆ. ಮಳೆಯಾಶ್ರಿತ ಪ್ರದೇಶವಾಗಿರುವುದರಿಂದ ಹುಣಸೆ ಬೆಳೆಗೆ ಭೂಮಿ ಯೋಗ್ಯವಾಗಿದೆ. ಇತರ ಬೆಳೆಗಳಿಗೆ ಹೋಲಿಸಿದರೆ ಖರ್ಚು ಕಡಿಮೆ ಇರುವುದರಿಂದ ಯುವ ರೈತರು ಆಸಕ್ತರಾಗಿದ್ದಾರೆ.

ಮಳೆ ಬರುತ್ತಿರುವುದರಿಂದ ಹುಣಸೆಗೆ ರೋಗ- ಕೀಟಗಳ ಬಾಧೆ ಇಲ್ಲವಾಗಿದೆ. ಹುಣಸೆ ಸಸಿಗಳನ್ನು 5ರಿಂದ 6 ವರ್ಷ ಚೆನ್ನಾಗಿ ಆರೈಕೆ ಮಾಡಿದರೆ ಫಸಲು ಆರಂಭವಾಗುತ್ತದೆ. ಪ್ರತಿ ವರ್ಷವು ಲಾಭ ತಂದುಕೊಡುತ್ತದೆ ಎನ್ನುತ್ತಾರೆ ರೈತರು.

ADVERTISEMENT

ಹುಣಸೆ ಮರದಲ್ಲಿ ಉತ್ತಮ ಹೂ‌ ಮತ್ತು ಕಾಯಿ ಕಂಡರೆ ಸಾಕು, ಜಮೀನಿನ ಮಾಲೀಕರನ್ನು ಹುಡುಕಿಕೊಂಡು ಗುತ್ತಿಗೆದಾರರು ಬರುತ್ತಾರೆ. ಮರದಲ್ಲಿರುವ ಕಾಯಿಗೆ ದರ ನಿಗದಿ ಮಾಡುತ್ತಾರೆ. ಯಾರು ಹೆಚ್ಚಿನ ದರ ನೀಡುತ್ತಾರೊ, ಅವರಿಗೆ ಮರ ಗುತ್ತಿಗೆ ನೀಡುತ್ತಾರೆ. ಇನ್ನು ಕೆಲವರು ಮೂರು ವರ್ಷದವರೆಗೂ ಕರಾರು ಮಾಡಿಕೊಳ್ಳುತ್ತಾರೆ.

ತಾಲ್ಲೂಕಿನ ಬಹುತೇಕ ಹುಣಸೆ ಮರಗಳಲ್ಲಿ ಚೆನ್ನಾಗಿ ಕಾಯಿ ಬಿಟ್ಟಿವೆ. ಈ ಬಾರಿ ಹುಣಸೆ ಬೆಳೆ ರೈತರಿಗೆ ವರದಾನವಾಗಲಿದೆ. ಕಾರ್ಮಿಕರಿಗೆ ಉದ್ಯೋಗವೂ ದೊರಕಲಿದೆ ಎನ್ನುವುದು ರೈತರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.