ADVERTISEMENT

ಅಂಗವಿಕಲರ ಅನಿರ್ದಿಷ್ಟ ಧರಣಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 21:02 IST
Last Updated 14 ಅಕ್ಟೋಬರ್ 2019, 21:02 IST
ಅನಿರ್ದಿಷ್ಟ ಧರಣಿ ನಡೆಸಿದ ಅಂಗವಿಕಲರಿಂದ ಜಿಲ್ಲಾಧಿಕಾರಿ ಕೆ.ರಾಕೇಶ್‌ಕುಮಾರ್ ಅವರು ಮನವಿ ಸ್ವೀಕರಿಸಿದರು
ಅನಿರ್ದಿಷ್ಟ ಧರಣಿ ನಡೆಸಿದ ಅಂಗವಿಕಲರಿಂದ ಜಿಲ್ಲಾಧಿಕಾರಿ ಕೆ.ರಾಕೇಶ್‌ಕುಮಾರ್ ಅವರು ಮನವಿ ಸ್ವೀಕರಿಸಿದರು   

ತುಮಕೂರು: ಅಂಗವಿಕಲರಿಗಾಗಿ ಸರ್ಕಾರ ರೂಪಿಸಿದ ಯೋಜನೆಗಳ ಸೌಲಭ್ಯಗಳಿಂದ ತಾವು ವಂಚಿತರಾಗಿದ್ದು, ಕೂಡಲೇ ಸೌಲಭ್ಯ ಕಲ್ಪಿಸಿ ಜೀವನ ನಿರ್ವಹಣೆಗೆ ಸಹಾಯ ಮಾಡಬೇಕು ಎಂದು ಒತ್ತಾಯಿಸಿ ತುಮಕೂರು ನಗರ ಅಂಗವಿಕಲರ ಒಕ್ಕೂಟದ ನೇತೃತ್ವದಲ್ಲಿ ಕೆಲ ಅಂಗವಿಕಲರು ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಧರಣಿ ನಡೆಸಿದರು.

ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದು, ಬೇಡಿಕೆ ಈಡೇರುವವರೆಗೂ ಅನಿರ್ದಿಷ್ಟ ಧರಣಿ ಮುಂದುವರಿಸುತ್ತೇವೆ ಎಂದು ಧರಣಿ ನಿರತರು ಹೇಳಿದರು.

ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ.ರಾಕೇಶ್‌ಕುಮಾರ್ ಅವರು ಬಂದು ಮನವಿ ಸ್ವೀಕರಿಸಿದರು.

ADVERTISEMENT

‘ತಮಗೆ ಉದ್ಯೋಗವೂ ಇಲ್ಲ. ಅಂಗವಿಕಲರ ಅಭಿವೃದ್ಧಿ ಇಲಾಖೆಯಿಂದ ದೊರಕಬೇಕಾದ ಗೌರವ ಧನವೂ ಇಲ್ಲ. ಮಹಾನಗರ ಪಾಲಿಕೆಯಿಂದ ಅಂಗವಿಕಲರಿಗೆ ಸಿಗಬೇಕಾದ ಸೌಕರ್ಯಗಳೂ ಸಿಕ್ಕಿಲ್ಲ’ ಎಂದು ಟಿ.ಎಸ್. ಮಂಜುಳಾ ಹೇಳಿದರು.

’ತಮಗೆ ಯಾವುದೇ ಉದ್ಯೋಗವಿಲ್ಲ. ಆರೋಗ್ಯ ಇಲಾಖೆಯಿಂದ ಆರೋಗ್ಯ ಸೇವೆ, ಅಂಗವಿಕಲರ ಇಲಾಖೆಯಿಂದ ಸೌಲಭ್ಯಗಳು ಸಿಕ್ಕಿಲ್ಲ’ ಎಂದು ಮಧುಗಿರಿಯ ನಾಗರತ್ನ ಸಮಸ್ಯೆ ಹೇಳಿಕೊಂಡರು.

’ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಂಗಡಿ ಮಳಿಗೆ ಹಂಚಿಕೆಯಲ್ಲಿ ಸಾಕಷ್ಟು ತಾರತಮ್ಯವಾಗಿದೆ. ಅಂಗವಿಕಲಾರದ ತಮಗೆ ಸೂಕ್ತ ಅನುಕೂಲ ಕಲ್ಪಿಸಿಕೊಡಬೇಕು’ ಎಂದು ಅಂಗವಿಕಲರಾದ ಗಂಗರಾಜು ಮನವಿ ಮಾಡಿದರು.

ಹಲವಾರು ಬಾರಿ ಇಲಾಖೆಗೆ ಯೋಜನೆಗಳಡಿ ನೆರವು ಯಾಚಿಸಿದ್ದರೂ ಸ್ಪಂದಿಸಿಲ್ಲ. ಹಾಗಾಗಿ ಅನಿರ್ದಿಷ್ಟ ಧರಣಿ ಮಾಡುತ್ತಿದ್ದು, ನ್ಯಾಯ ಸಿಗುವವರೆಗೂ ಧರಣಿ ಮುಂದುವರಿಸುತ್ತೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.