ADVERTISEMENT

ಆರೋಗ್ಯ ಇಲಾಖೆ; ಖಾಲಿ ಹುದ್ದೆ ನೇಮಕಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 5:29 IST
Last Updated 6 ಫೆಬ್ರುವರಿ 2021, 5:29 IST
ಪುಟ್ಟಸ್ವಾಮಿ
ಪುಟ್ಟಸ್ವಾಮಿ   

ತುಮಕೂರು: ಆರೋಗ್ಯ ಇಲಾಖೆಯಲ್ಲಿ 30 ವರ್ಷಗಳಿಂದ ವೃಂದ ಮತ್ತು ನಿಯಮಗಳನ್ನು ಪರಿಷ್ಕರಿಸಿಲ್ಲ. ದೀರ್ಘಾವಧಿಯಲ್ಲಿ ಬಾಕಿ ಇರುವ ನಿಯಮಗಳನ್ನು ಪರಿಷ್ಕರಿಸಬೇಕು. ಇಲಾಖೆಯಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಪುಟ್ಟಸ್ವಾಮಿ ಸರ್ಕಾರವನ್ನು ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘20 ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಗ್ರಾಮಾಂತರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಮೇಲೆ ಅಧಿಕ ಒತ್ತಡವಾಗುತ್ತಿದೆ. ರಜೆ ಸಿಗುತ್ತಿಲ್ಲ. ಆದ್ದರಿಂದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು’ ಎಂದು ಆಗ್ರಹಿಸಿದರು.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ನೌಕರರ ಕೇಂದ್ರ ಸಂಘದಿಂದ ಸರ್ಕಾರಕ್ಕೆ ನಾಲ್ಕು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಮನವಿ ಸಲ್ಲಿಸಿದ್ದೆವು. ಇದಕ್ಕೆ ಸ್ಪಂದನೆ ದೊರೆತಿದೆ ಎಂದರು.

ADVERTISEMENT

ನೌಕರರು ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಆದರೆ ವೈದ್ಯ ವೃಂದಕ್ಕೆ ಮಾತ್ರ ₹ 25 ಸಾವಿರದಿಂದ ₹ 1.25 ಲಕ್ಷದವರೆಗೆ ವಿಶೇಷ ಭತ್ಯೆ ನೀಡಲಾಗಿದೆ. ಅರೆ ವೈದ್ಯಕೀಯ, ವಾಹನಗಳ ಚಾಲಕರಿಗೆ ವಿಶೇಷ ಭತ್ಯೆ ನೀಡಿಲ್ಲ. ಈ ರೀತಿಯ ತಾರತಮ್ಯ ಸರಿಯಲ್ಲ. ಕಷ್ಟಪಟ್ಟು ಕಾರ್ಯನಿರ್ವಹಿಸಿದ ಎಲ್ಲರಿಗೂ ವಿಶೇಷ ಭತ್ಯೆ ಮಂಜೂರು ಮಾಡಬೇಕು ಎಂದರು.

ಸರ್ಕಾರ ಆರೋಗ್ಯ ಇಲಾಖೆ ನೌಕರರ ದಿನಾಚರಣೆ ಆಚರಿಸಲು ಕ್ರಮವಹಿಸಬೇಕು. ಬಯೋಮೆಟ್ರಿಕ್ ಕಡ್ಡಾಯಗೊಳಿಸಬಾರದು ಎಂದರು.

ಪುಟ್ಟಸ್ವಾಮಿ, ಶ್ರೀನಿವಾಸ್, ಪ್ರಕಾಶ್, ನರಸಿಂಹರಾಜು, ನಾಗರಾಜು, ನರಸಿಂಹಮೂರ್ತಿ, ಜಗದೀಶ್ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.