ಕೊಡಿಗೇನಹಳ್ಳಿ: ಹೋಬಳಿಯ ಪೊಲೇನಹಳ್ಳಿ ಗ್ರಾಮಸ್ಥರು ನೀರಿಗಾಗಿ ಒತ್ತಾಯಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿನ ನೀರಿನ ಸಮಸ್ಯೆ ಬಗೆಹರಿಸುವಂತೆ ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನೀರಿನ ಸಮಸ್ಯೆ ಬಗೆಹರಿಸದಿದ್ದಲ್ಲಿ ಮಧುಗಿರಿ ತಾಲ್ಲೂಕು ಕಚೇರಿ ಮುಂಭಾಗ ಧರಣಿ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.
ಗ್ರಾಮದಲ್ಲಿ ಎರಡು ತಿಂಗಳಿನಿಂದ ನೀರಿಗೆ ಸಮಸ್ಯೆಯಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರ ಒತ್ತಾಯದ ಮೇರೆಗೆ ತಾತ್ಕಾಲಿಕವಾಗಿ ಒಂದೂವರೆ ತಿಂಗಳು ಟ್ಯಾಂಕರ್ನಲ್ಲೆ ಗ್ರಾಮಕ್ಕೆ ನೀರು ಹೊಡೆಸಲಾಯಿತು. ಆದರೆ ಈಗ ಗ್ರಾಮ ಪಂಚಾಯಿತಿಯಿಂದ ಹೊಡೆಸುತ್ತಿದ್ದ ಟ್ಯಾಂಕರ್ ನಿಲ್ಲಿಸಲಾಗಿದೆ. ಅದನ್ನು ಕೇಳಿದರೆ ಅನುದಾನವಿಲ್ಲ ಎನ್ನುತ್ತಾರೆ. ಶಾಸಕರನ್ನು ಕೇಳಿದರೆ ಗ್ರಾಮ ಪಂಚಾಯಿತಿಯನ್ನು ಕೇಳಿ ಎನ್ನುತ್ತಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ವಾಹನಗಳ ಸೌಲಭ್ಯ ಇರುವವರು ನೀರನ್ನು ಬೇರೆಡೆಯಿಂದ ತರುತ್ತಾರೆ. ಸಾಮಾನ್ಯರ ಸಮಸ್ಯೆ ಹೇಳತೀರದಂತಿದೆ. ನೀರಿನ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಬೇಕು ಎಂದು ಪೊಲೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಜಿ.ಲಕ್ಷ್ಮಣ್, ಪ್ರದೀಪ್ ಕುಮಾರ್, ಲಕ್ಷ್ಮಮ್ಮ ಗ್ರಾಮಸ್ಥರಾದ ಸತ್ತಾರ್ ಸಾಬ್, ರಾಮಕೃಷ್ಣಪ್ಪ, ಮೈಲಾರಿ, ಮಲ್ಲಿಕಾರ್ಜುನ್, ಶಿವಲಿಂಗಪ್ಪ, ಗೋಪಾಲ್, ಗಂಗಾಧರ್, ಶಿವಕುಮಾರ್, ರಾಮಪ್ಪ, ರತ್ನಮ್ಮ, ಶಾಂತಮ್ಮ, ಗುಜ್ಜಮ್ಮ, ಹನುಮಕ್ಕ, ಸಿದ್ದಮ್ಮ, ತಿಪ್ಪಮ್ಮ, ವೆಂಕಟಮ್ಮ, ಸಂಜೀವರಾಯಪ್ಪ, ಪ್ರಮೀಳಮ್ಮ, ಸುನಂದಮ್ಮ ಮನವಿಮಾಡಿದರು.
‘ಹಲವು ತಿಂಗಳುಗಳಿಂದ ಗ್ರಾಮದಲ್ಲಿ ನೀರಿನ ಸಮಸ್ಯೆಯಾಗಿದೆ. ಗ್ರಾಮದ ಕೆಲ ಮಹಿಳೆಯರು ನನ್ನನ್ನು ಕಂಡ ತಕ್ಷಣ ಗಲಾಟೆಗೆ ಬರುತ್ತಾರೆ. ಒಮ್ಮೊಮ್ಮೆ ಹೊಡೆಯುವುದಕ್ಕೆ ಬರುತ್ತಾರೆ. ಆದರೂ ಅವರ ಮೇಲೆ ಬೇಸರಿಸಿಕೊಳ್ಳದೆ ಅವರ ಸಮಸ್ಯೆಗಳನ್ನು ಆಲಿಸಿದ್ದೇನೆ. ಸಂಬಂಧಿಸದವರು ಶೀಘ್ರ ಸಮಸ್ಯೆ ಬಗೆಹರಿಸಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ಲಕ್ಷ್ಮಮ್ಮ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.