ADVERTISEMENT

ಬೆಸ್ಕಾಂ ಉಪ ಕೇಂದ್ರಗಳಲ್ಲಿ ಸೋಲಾರ್ ಘಟಕ ಸ್ಥಾಪನೆ: ಡಿ.ಕೆ.ಸುರೇಶ್‌ ಮಾಹಿತಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2024, 14:31 IST
Last Updated 23 ಜನವರಿ 2024, 14:31 IST
ಕುಣಿಗಲ್ ತಾಲ್ಲೂಕು ಸಂತೆಮಾವತ್ತೂರು ಗ್ರಾಮ ಪಂಚಾಯಿತಿ ಜನಸಂಪರ್ಕ ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದರು
ಕುಣಿಗಲ್ ತಾಲ್ಲೂಕು ಸಂತೆಮಾವತ್ತೂರು ಗ್ರಾಮ ಪಂಚಾಯಿತಿ ಜನಸಂಪರ್ಕ ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದರು    

ಕುಣಿಗಲ್: ವಿದ್ಯುತ್ ಸಮಸ್ಯೆಯಿಂದ ಮುಕ್ತರಾಗಲು ತಾಲ್ಲೂಕಿನ ಬೆಸ್ಕಾಂ ಉಪವಿದ್ಯುತ್ ಕೇಂದ್ರಗಳಲ್ಲಿ ಸೋಲಾರ್ ಘಟಕ ಪ್ರಾರಂಭಿಸಿ 64 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿ, ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್‌ ತಿಳಿಸಿದರು.

ತಾಲ್ಲೂಕಿನ ಸಂತೆಮಾವತ್ತೂರು ಗ್ರಾಮ ಪಂಚಾಯತಿಯಲ್ಲಿ ಮಂಗಳವಾರ ನಡೆದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

ಬೇಸಿಗೆ ಪ್ರಾರಂಭವಾಗುತ್ತಿದ್ದು, ಜನ ಜಾನುವಾರುಗಳಿಗೆ ಅಗತ್ಯ ನೀರು, ಮೇವು ಕೊರತೆಯಾಗದಂತೆ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳು ಸಮನ್ವಯತೆ ಸಾಧಿಸಿ ಕಾರ್ಯನಿರ್ವಹಿಸಲು ಸೂಚನೆ ನೀಡಿದರು.

ADVERTISEMENT

ಬಗರ್‌ಹುಕುಂ ಸಾಗುವಳಿದಾರರಿಗೆ ಭೂ ಮಂಜೂರಾತಿಯಾಗಿ ದಶಕಗಳೇ ಕಳೆದಿದ್ದರೂ, ಸಾಗುವಳಿ ಚೀಟಿ ದೊರೆಯದೆ ಪರದಾಡುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಹಶೀಲ್ದಾರ್ ಅವರಿಗೆ ಸೂಚನೆ ನೀಡಿ, ಮುಂದಿನ ದಿನಗಳಲ್ಲಿ ಭೂ ಮಂಜೂರಾತಿ ದೊರತೆ ಕ್ಷಣವೇ ದಾಖಲೆ ಪಡೆದು ಸಾಗುವಳಿ ಚೀಟಿ, ಖಾತೆಗಳನ್ನು ರೈತರ ಹೆಸರಿಗೆ ನೀಡಲು ವ್ಯವಸ್ಥಿತ ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದು ಹೇಳಿದರು.

ತಾಲ್ಲೂಕಿನಲ್ಲಿ ನಿವೇಶನರಹಿತರಿಗೆ ನಿವೇಶನ ಹಂಚಲು 270 ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿದೆ. ಸಂತೆಮಾವತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 11 ಎಕರೆ ಗುರುತಿಸಲಾಗಿದೆ. ಅರ್ಹರಿಗೆ ನಿವೇಶನ ವಿತರಿಸಲಾಗುವುದು ಎಂದು ತಿಳಿಸಿದರು

‘ಕುಣಿಗಲ್ ಸ್ಟಡ್ ಫಾರ್ಮ್‌ ಯಾರಿಗೂ ಮಾರಾಟ ಮಾಡುವುದಿಲ್ಲ. ಕುದುರೆಗಳು ಇರುತ್ತವೆ. ತಾಲ್ಲೂಕಿನ ರೈತರ, ಮಹಿಳೆಯರ ಮತ್ತು ಯುವಕರ ಭವಿಷ್ಯಕ್ಕಾಗಿ ಉಪಯೋಗಿಸಲಾಗುವುದು. ಕೆಲವರು ರಾಜಕೀಯ ಉದ್ದೇಶದಿಂದ ಹೋರಾಟ ಮಾಡುತ್ತಿದ್ದಾರೆ’ ಎಂದು ದೂರಿದರು.

ಶಾಸಕ ಡಾ.ರಂಗನಾಥ್, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈತಪ್ಪಿ ಹೋಗಿದ್ದ ತಾಲ್ಲೂಕಿನ ನೀರಾವರಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಾಗಿದ್ದ ಸಂಪರ್ಕ ಕಾಲುವೆ ಯೋಜನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್ ಶ್ರಮದಿಂದಾಗಿ ಮತ್ತೆ ಮಂಜೂರಾತಿ ದೊರೆತಿದ್ದು, ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾಬಾಯಿ, ಉಪಾಧ್ಯಕ್ಷ ಬಸವರಾಜು, ಮುಖಂಡರಾದ ಸುರೇಶ್, ಮಾಗಡಯ್ಯ, ತಹಶೀಲ್ದಾರ್ ವಿಶ್ವನಾಥ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜೋಸೆಫ್‌, ಪಿಡಿಒ ವತ್ಸಲಾ, ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.