ತುಮಕೂರು: ಹೇಮಾವತಿ ನೀರು ಹರಿಸುವಂತೆ ಕೋರಿದ ಗ್ರಾಮಸ್ಥರನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನೀರು ಪೂರೈಕೆಗೆ ಆಗ್ರಹಿಸಿ ಶಿರಾ ತಾಲ್ಲೂಕು ಬುಕ್ಕಾಪಟ್ಟಣ ಹೋಬಳಿಯ ಗೋಪಾಲದೇವರಹಳ್ಳಿ ಗ್ರಾಮಸ್ಥರು ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಿದ್ದರು. ಬುಕ್ಕಾಪಟ್ಟಣ ಹೋಬಳಿ ಸಚಿವರು ಪ್ರತಿನಿಧಿಸುವ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುತ್ತದೆ. ಚುನಾವಣೆ ಬಹಿಷ್ಕರಿಸಿದ ಗ್ರಾಮಸ್ಥರ ನಿಲುವು ಸಚಿವರ ಆಕ್ರೋಶಕ್ಕೆ ಕಾರಣವಾಗಿದೆ.
‘ಇಲ್ಲೊಬ್ಬ ಎಂಎಲ್ಎ ಇದ್ದಾನೆ, ಯಾವನಾದರೂ ಬೋಸುಡಿಗೆ ನನ್ಮಗ ನನ್ನ ಬಳಿ ಬಂದು ನೀರಿನ ಸಮಸ್ಯೆ ಇದೆ ಪರಿಹರಿಸಿ ಎಂದು ಕೇಳಿದ್ದೀರಾ. ಸಮಸ್ಯೆ ಹೇಳಿ ಅರ್ಜಿ ಕೊಟ್ಟು ಅದನ್ನು ಪರಿಹರಿಸದಿದ್ದು ಚುನಾವಣೆ ಬಹಿಷ್ಕರಿಸಿದ್ದರೆ ಗೌರವ ಇರುತ್ತಿತ್ತು’ ಎಂದು ಕಿಡಿಕಾರಿದ್ದಾರೆ.
‘ಜನರು ಓಟ್ ಹಾಕುತ್ತಿದ್ದರು. ನೀನೇ ಮಾಡಿರುವುದು’ ಎಂದು ಗ್ರಾಮದ ಮುಖಂಡರೊಬ್ಬರನ್ನು ಸಚಿವರು ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ಅವರು ‘ಇಲ್ಲ’ ಎಂದು ಹೇಳಲು ಮುಂದಾದಾಗ, ‘ನನಗೆ ಮಾಹಿತಿ ಇದೆ’ ಎಂದಿದ್ದಾರೆ. ‘ಅದ್ಯಾರ್ ಕೈಯಲ್ಲಿ ಬಿಡಿಸಿಕೊಳ್ಳುತ್ತೀರಾ ಬಿಡಿಕೊಳ್ಳಿ ನೀರ. ನಾನೂ ನೋಡತ್ತೇನೆ’ ಎಂದು ಸಚಿವರು ಕಠಿಣವಾಗಿ ನುಡಿದಿದ್ದಾರೆ.
‘ಸಮಸ್ಯೆ ಇದೆ ಸರ್. ಕಳೆದ ವರ್ಷದ ಟ್ಯಾಂಕರ್ ಮೂಲಕ ನೀರು ಪಡೆದೆವು’ ಎಂದು ಗ್ರಾಮಸ್ಥರು ತಿಳಿಸಿದಾಗ, ‘ನೀರಿನ ಸಮಸ್ಯೆ ಇದೆ ಎಂದು ನನ್ನ ಬಳಿ ಒಂದು ಮಾತು ಕೇಳಿದ್ದೀರಾ. ನನ್ನ ಬಳಿ ಒಬ್ಬನೂ ಬಂದಿಲ್ಲ. ಇಡೀ ಜಿಲ್ಲೆಯಲ್ಲಿಯೇ ಕೆಟ್ಟ ಪಂಚಾಯಿತಿ ಮಾಡಿದ್ದೀರಾ. ನರೇಗಾ ಯೋಜನೆಯಲ್ಲಿ ನೋಂದಣಿಯೇ ಇಲ್ಲ. ಒಳ್ಳೆಯ ಕೆಲಸ ಮಾಡುವುದು ಬಿಟ್ಟು ಹೀಗೆ ಕೆಟ್ಟ ಕೆಲಸ ಮಾಡುತ್ತೀರಿ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲ ಗ್ರಾಮಸ್ಥರು, ‘ನಾವು ಈ ಹಿಂದಿನಿಂದ ಹೋರಾಟ ಮಾಡಿದ್ದೇವೆ’ ಎನ್ನುತ್ತಿದ್ದಂತೆ ಮಾಧುಸ್ವಾಮಿ ಮತ್ತು ಮಾಜಿ ಶಾಸಕ ಸುರೇಶ್ಬಾಬು ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.