ಗುಬ್ಬಿ: ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಠಾಣೆ ಪಿಎಸ್ಐ ನಾಗರಾಜು ಶಾಸಕ ಮಸಾಲ ಜಯರಾಮ್ ಅವರ ಕುಮ್ಮಕ್ಕಿನಿಂದ ಕ್ಷೇತ್ರದ ಸಾರ್ವಜನಿಕರು ಮತ್ತು ಜೆಡಿಎಸ್ ಕಾರ್ಯಕರ್ತರೊಂದಿಗೆ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದಾರೆ ಎಂದು ಠಾಣೆಯ ಮುಂದೆ ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ಮತ್ತು ಬೆಂಬಲಿಗರು ಸೋಮವಾರ ಪ್ರತಿಭಟಿಸಿದರು.
ಸಿ.ಎಸ್.ಪುರ ಸರ್ಕಲ್ ಬಳಿ ಜಮಾಯಿಸಿದ ಕಾರ್ಯಕರ್ತರು ಮೆರವಣಿಗೆ ನಡೆಸಿ ಮಸಾಲ ಜಯರಾಮ್ ವಿರುದ್ಧ ಘೋಷಣೆ ಕೂಗಿದರು. ಠಾಣೆ ಮುಂದೆ ಧರಣಿ ಕುಳಿತರು.
ಇಡಗೂರು ಗ್ರಾಮದ ಜೆಡಿಎಸ್ ಕಾರ್ಯಕರ್ತ ಆನಂದ್ ಕಾರ್ಯನಿಮಿತ್ತ ಪಂಚಾಯಿತಿ ಕಚೇರಿಗೆ ತೆರಳಿದ್ದರು. ಆಗ ಬಿಜೆಪಿಯ ಗುತ್ತಿಗೆದಾರ, ಕಂಪ್ಯೂಟರ್ ಮುಂದೆ ಕುಳಿತು ಬಿಲ್ಗಳನ್ನು ಪಾಸ್ ಮಾಡುತ್ತಿರುವ ಬಗ್ಗೆ ಆಕ್ಷೇಪ ಎತ್ತಿದರು. ಈ ಕಾರಣಕ್ಕೆ ಕಾರ್ಯಕರ್ತನ ವಿರುದ್ಧ ದೂರು ನೀಡಲಾಗಿದೆ. ಗುತ್ತಿಗೆದಾರನ ಕೆಲಸಗಳಿಗೆ ಸಹಕರಿಸಿದ ಪಿಡಿಒ ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಂ.ಟಿ.ಕೃಷ್ಣಪ್ಪ ಆಗ್ರಹಿಸಿದರು.
ಇದನ್ನು ಪ್ರಶ್ನಿಸಿದ ಆನಂದ್ ವಿರುದ್ಧವೇ ದೂರು ದಾಖಲಿಸಲಾಗಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಪಿಎಸ್ಐ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದು ಹೀಗೆ ಮುಂದುವರಿದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಧರಣಿ ಕೂರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಖಂಡ ಬೀರಮಾರನಹಳ್ಳಿ ನರಸೇಗೌಡ ಮಾತನಾಡಿದರು. ಸ್ಥಳಕ್ಕೆ ಬಂದ ಸಿಪಿಐ ರಾಮಕೃಷ್ಣಯ್ಯ ಘಟನೆ ಬಗ್ಗೆ ಮಾಹಿತಿ ಪಡೆದರು. ಪಂಚಾಯಿತಿ ಅಧಿಕಾರಿಗಳನ್ನು ಕರೆಸಿ ವಿವರ ಪಡೆದರು. ಬುದ್ಧಿ ಮಾತು ಹೇಳಿ ಪ್ರಕರಣ ಇತ್ಯರ್ಥಗೊಳಿಸಿದರು.
ಜಿ.ಪಂ. ಮಾಜಿ ಸದಸ್ಯ ನಂಜೇಗೌಡ , ಗ್ರಾ.ಪಂ ಸದಸ್ಯರಾದ ರಾಮು, ಈಶ್ವರ್ ಗೌಡ, ತಾ.ಪಂ. ಸದಸ್ಯ ತಿಮ್ಮರಾಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.