ADVERTISEMENT

ಕೊರಟಗೆರೆ: ಕ್ಯಾಮೇನಹಳ್ಳಿ ಆಂಜನೇಯ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 5:21 IST
Last Updated 20 ಫೆಬ್ರುವರಿ 2021, 5:21 IST
ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು
ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು   

ಕೊರಟಗೆರೆ: ತಾಲ್ಲೂಕಿನ ಕ್ಯಾಮೇನಹಳ್ಳಿಯ ಎದುರು ಮುಖದ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.

3 ಸಾವಿರ ವರ್ಷಗಳ ಇತಿಹಾಸ ಇರುವ ಕ್ಯಾಮೇನಹಳ್ಳಿ ಜಾತ್ರೆಯಲ್ಲಿ ತಾಲ್ಲೂಕು, ಜಿಲ್ಲೆ ಹಾಗೂ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದ ಸಾವಿರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.

ಮಧ್ಯಾಹ್ನ 1.45ಕ್ಕೆ ಮಧುಗಿರಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೊಳ ಹಾಗೂ ತಹಶೀಲ್ದಾರ್ ಬಿ.ಎಂ.ಗೋವಿಂದರಾಜು ರಥೋತ್ಸವಕ್ಕೆ ಚಾಲನೆ ನೀಡಿದರು. 1.45ರ ಸುಮಾರಿಗೆ ಗರುಡವೊಂದು ರಥದ ಸುತ್ತ ಪ್ರದಕ್ಷಣೆ ಹಾಕಿದ ನಂತರ ಉತ್ಸವಕ್ಕೆ ಚಾಲನೆ ನೀಡಲಾಯಿತು. ಗರುಡ ರಥದ ಮೇಲೆ ಪ್ರದಕ್ಷಿಣೆ ಹಾಕುವುದನ್ನು ಕಂಡ ಭಕ್ತರು ‘ಹೋ...’ ಎಂದು ಒಂದೇ ಬಾರಿಗೆ ಹರ್ಷೋದ್ಘಾರ ಮಾಡಿದರು. `ಗೋವಿಂದಾ' ಎಂದು ಜೋರಾಗಿ ಕೂಗುತ್ತಾ ಉತ್ಸಾಹದಿಂದ ತೇರು ಎಳೆದರು.

ADVERTISEMENT

ನವದಂಪತಿಗಳು ಜಾತ್ರೆಯಲ್ಲಿ ಓಡಾಡುತ್ತಿದ್ದದ್ದು ಕಂಡುಬಂತು. ಬಾಳೆ ಹಣ್ಣಿಗೆ ಧವನ ಸಿಕ್ಕಿಸಿ ರಥಕ್ಕೆ ಎಸೆಯುತ್ತ ಭಕ್ತರು ತಮ್ಮ ಭಕ್ತಿ ಸಮರ್ಪಿಸಿದರು. ಪ್ರತಿ ವರ್ಷ ಸಂಕ್ರಾತಿ ನಂತರ ನಡೆಯುವ ಕ್ಯಾಮೇನಹಳ್ಳಿ ಎದುರು ಮುಖದ ಆಂಜನೇಯಸ್ವಾಮಿ ರಥೋತ್ಸವ ಈ ಭಾಗದಲ್ಲಿ ಅತಿ ಹೆಚ್ಚು
ಮನ್ನಣೆ ಪಡೆದಿದೆ. ಬಿದಲೋಟಿ, ಕ್ಯಾಮೇನಹಳ್ಳಿ, ಹೊನ್ನಾರನಹಳ್ಳಿ, ತಿಮ್ಮನಹಳ್ಳಿ, ತುಂಬಗಾನಹಳ್ಳಿ ಗ್ರಾಮಗಳಲ್ಲಿ ಹಬ್ಬದಂತೆ ಆಚರಣೆ ಮಾಡಲಾಗುತ್ತದೆ.

ತಾಲ್ಲೂಕಿನ ಬೊಮ್ಮಲದೇವಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಪಾಳ್ಯ, ಅಕ್ಕಾಜಿಹಳ್ಳಿ, ದೊಡ್ಡಪಾಳ್ಯ, ಅವುದಾರನಹಳ್ಳಿ ಗ್ರಾಮಗಳಿಂದ ರಥೋತ್ಸವಕ್ಕೂ ಮೂರು ದಿನ ಮುನ್ನ ಆರತಿ ಸೇವೆ ನಡೆಸಲಾಗುತ್ತದೆ. ಮಹಿಳೆಯರು 10 ಕಿಲೋಮೀಟರ್‌ ಕಾಲ್ನಡಿಗೆಯಲ್ಲಿ ಆರತಿ ಹೊತ್ತು ಬಂದು ಸೇವೆ ಸಲ್ಲಿಸಿ ಆ ದಿನ ಅಲ್ಲಿಯೇ ತಂಗಿದ್ದು ಮರು ದಿನ ವಾಪಸ್ಸಾಗುವರು.

ಸಂಜೆ ಹೊನ್ನಾರನಹಳ್ಳಿ, ತಿಮ್ಮನಹಳ್ಳಿ ಗ್ರಾಮಗಳಿಂದ ಆರತಿ ಉತ್ಸವ ನಡೆಯುತ್ತದೆ. ಚಿಕ್ಕಪಾಳ್ಯ, ಅಕ್ಕಾಜಿಹಳ್ಳಿ ಸುತ್ತಮುತ್ತಲ ಗ್ರಾಮಸ್ಥರ ಮುಂದಾಳತ್ವದಲ್ಲಿ ಸಂಜೆ ತೇರಿನ ಉತ್ಸವ ನಡೆಯಿತು. ಪೀಣ್ಯದ ಪಿ.ಎನ್.ಕೃಷ್ಣಮೂರ್ತಿ ಕುಟುಂಬದವರು, ಅಕ್ಕಿರಾಂಪುರ, ಚಿಕ್ಕಪಾಳ್ಯ ಸುತ್ತಮುತ್ತಲಿನ ಗ್ರಾಮಸ್ಥರಿಂದ ಜಾತ್ರೆಗೆ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.