ADVERTISEMENT

ಕನಕಪುರ– ದಾಬಸ್‌ಪೇಟೆ– ಬೆಂಗಳೂರು ರಿಂಗ್‌ ರಸ್ತೆ: ಭೂ ಸ್ವಾಧೀನ ಕೈಬಿಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 7:35 IST
Last Updated 24 ಆಗಸ್ಟ್ 2025, 7:35 IST
ತುಮಕೂರು ಸಿದ್ಧಗಂಗಾ ಮಠದಲ್ಲಿ ಶನಿವಾರ ಬೆಂಗಳೂರು ರಿಂಗ್‌ ರಸ್ತೆ ಕುರಿತು ಕೇಂದ್ರ ಸಚಿವ ವಿ.ಸೋಮಣ್ಣ ಜತೆ ಸಿದ್ಧಲಿಂಗ ಸ್ವಾಮೀಜಿ ಚರ್ಚಿಸಿದರು. ಶಿವಗಂಗೆ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ವಕೀಲ ಸಿ.ಕೆ.ಮಹೇಂದ್ರ, ಮುಖಂಡರಾದ ಉಮೇಶ್‌ ಕಂಬಾಳು, ಕರಿಮಣ್ಣೆಯ ದೇವಕುಮಾರ್‌, ದಾಬಸ್‌ಪೇಟೆ ಗಟ್ಟಿಬೈರಪ್ಪ, ರಮೇಶ್, ಗುರುಪ್ರಸಾದ್‌ ಇತರರು ಹಾಜರಿದ್ದರು
ತುಮಕೂರು ಸಿದ್ಧಗಂಗಾ ಮಠದಲ್ಲಿ ಶನಿವಾರ ಬೆಂಗಳೂರು ರಿಂಗ್‌ ರಸ್ತೆ ಕುರಿತು ಕೇಂದ್ರ ಸಚಿವ ವಿ.ಸೋಮಣ್ಣ ಜತೆ ಸಿದ್ಧಲಿಂಗ ಸ್ವಾಮೀಜಿ ಚರ್ಚಿಸಿದರು. ಶಿವಗಂಗೆ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ವಕೀಲ ಸಿ.ಕೆ.ಮಹೇಂದ್ರ, ಮುಖಂಡರಾದ ಉಮೇಶ್‌ ಕಂಬಾಳು, ಕರಿಮಣ್ಣೆಯ ದೇವಕುಮಾರ್‌, ದಾಬಸ್‌ಪೇಟೆ ಗಟ್ಟಿಬೈರಪ್ಪ, ರಮೇಶ್, ಗುರುಪ್ರಸಾದ್‌ ಇತರರು ಹಾಜರಿದ್ದರು   

ತುಮಕೂರು: ಕನಕಪುರ– ದಾಬಸ್‌ಪೇಟೆ– ಬೆಂಗಳೂರು ರಿಂಗ್‌ ರಸ್ತೆ (ಬಿಆರ್‌ಆರ್‌) ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಒತ್ತಾಯಿಸಿದ್ದಾರೆ.

ನಗರದ ಸಿದ್ಧಗಂಗಾ ಮಠಕ್ಕೆ ಶನಿವಾರ ಕೇಂದ್ರ ಜಲ ಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭೇಟಿ ನೀಡಿದರು. ಈ ವೇಳೆ ರೈತರ ಸಮ್ಮುಖದಲ್ಲಿ ಭೂ ಸ್ವಾಧೀನ ಕೈಬಿಡುವಂತೆ ಒತ್ತಾಯಿಸಿ ಸಚಿವರಿಗೆ ಸ್ವಾಮೀಜಿ ಪತ್ರ ಸಲ್ಲಿಸಿದರು.

‘ಭಾರತ ಮಾಲಾ ಯೋಜನೆಯಡಿ 2019ರಲ್ಲಿ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಕನಕಪುರ- ರಾಮನಗರ- ಮಾಗಡಿ- ಶಿವಗಂಗೆ ಮಾರ್ಗವಾಗಿ ದಾಬಸ್‌ಪೇಟೆ ಸೇರುವ ಬೆಂಗಳೂರು ರಿಂಗ್‌ ರಸ್ತೆಗೆ ಭೂ ಸ್ವಾಧೀನ ಮಾಡಿಕೊಳ್ಳ ಲಾಗಿದೆ. ಭೂಮಿ ಕಳೆದುಕೊಂಡ ರೈತರಿಗೆ ಇದುವರೆಗೆ ಪರಿಹಾರ ನೀಡಿಲ್ಲ’
ಎಂದರು.

ADVERTISEMENT

‘ತಾತ್ಕಾಲಿಕವಾಗಿ ಯೋಜನೆ ನಿಲ್ಲಿಸಿದ್ದು, ಪರಿಹಾರ ಕೊಡಲು ಸಾಧ್ಯವಿಲ್ಲ’ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ರೈತರಿಗೆ ಭೂಮಿಯೂ ಇಲ್ಲ, ಪರಿಹಾರವೂ ಸಿಗದಂತಾಗಿದೆ. ಸೂಕ್ತ ಪರಿಹಾರ ವಿತರಿಸಬೇಕು, ಇಲ್ಲವೇ ಭೂಮಿ ವಾಪಸ್‌ ನೀಡಲಿ’ ಎಂದು ಒತ್ತಾಯಿಸಿದರು.

ಶಿವಗಂಗೆ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ‘ಭೂ ಸ್ವಾಧೀನದ ಹಣ ಬರಲಿದೆ ಎಂದು ರೈತರು ಸಾಲ ಮಾಡಿ ಮನೆ ನಿರ್ಮಿಸಿ, ಮದುವೆ ಮಾಡಿದ್ದಾರೆ. ಇದೀಗ ಸಾಲಕ್ಕೆ ಬಡ್ಡಿ ಕಟ್ಟಲು ಪರದಾಡುತ್ತಿದ್ದಾರೆ. ಸ್ವಾಧೀನ ಕೈ ಬಿಡುವಂತೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು’ ಎಂದು ಹೇಳಿದರು.

ಸಚಿವ ವಿ.ಸೋಮಣ್ಣ, ‘ಮಧ್ಯವರ್ತಿಗಳು ಕೆಲವೇ ಲಕ್ಷ ನೀಡಿ ರೈತರ ಭೂಮಿ ಖರೀದಿಸುತ್ತಿದ್ದಾರೆ. ಹೆದ್ದಾರಿ ಕಾಮಗಾರಿ ಪರ ಮಾತನಾಡಿದರೆ ದಲ್ಲಾಳಿ ಪರ ಮಾತಾಡಿದಂತೆ. ಆದರೂ ಕೇಂದ್ರ ಹೆದ್ದಾರಿ, ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಜತೆ ಈ ಯೋಜನೆಯ ಬಗ್ಗೆ ಚರ್ಚಿಸಿ, ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

ವಕೀಲ ಸಿ.ಕೆ.ಮಹೇಂದ್ರ, ರೈತ ಮುಖಂಡರಾದ ಉಮೇಶ್‌ ಕಂಬಾಳು, ಕರಿಮಣ್ಣೆಯ ದೇವಕುಮಾರ್‌, ದಾಬಸ್‌ಪೇಟೆ ಗಟ್ಟಿಬೈರಪ್ಪ, ರಮೇಶ್, ಗುರುಪ್ರಸಾದ್, ಶಿವಗಂಗೆಯ ಸುರೇಶ್, ಬೆಳಗುಂಬ ನಾಗೇಂದ್ರಕುಮಾರ್‌, ಪ್ರಕಾಶ್ ರಂಗೇನಹಳ್ಳಿ, ಗುಡೇಮಾರನಹಳ್ಳಿ ಶಿವರುದ್ರಪ್ಪ, ಮಾಗಡಿ ಬೋರಯ್ಯ, ಬೀರಗೊಂಡನಹಳ್ಳಿ ನಾರಾಯಣಗೌಡ, ಬಿಡದಿಯ ಶ್ರೀಧರ್, ರಾಮನಗರ ಹೇಮಂತಕುಮಾರ್‌ ಮೊದಲಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.