
ತುಮಕೂರು: ‘ಆಳುವವರ ಇಚ್ಚಾಶಕ್ತಿ ಕೊರತೆಯಿಂದ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಹೀಗಾದರೆ ಕನ್ನಡ ಕಲಿಯುವವರು ಯಾರು? ಮಕ್ಕಳು ಭಾಷೆಯಿಂದ ದೂರ ಆಗುತ್ತಿರುವುದು ಅಪಾಯಕಾರಿ ಬೆಳವಣಿಗೆ’ ಎಂದು ಸಾಹಿತಿ ಹಿ.ಚಿ.ಬೋರಲಿಂಗಯ್ಯ ಆತಂಕ ವ್ಯಕ್ತಪಡಿಸಿದರು.
ನಗರದ ಗಾಜಿನಮನೆಯಲ್ಲಿ ಮಂಗಳವಾರ ನಡೆದ 17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ಮಾತುಗಳನ್ನಾಡಿದರು.
ಮಕ್ಕಳು, ಯುವಕರು ಮೊಬೈಲ್ನಿಂದ ಹೊರ ಬರುತ್ತಿಲ್ಲ. ಆಧುನಿಕತೆಯ ಭರಾಟೆಯಿಂದ ಹಳ್ಳಿ ಭಾಗದ ಕಲೆ, ಹಾಡು, ಜ್ಞಾನದ ಪರಂಪರೆ ಮಾಯವಾಗುತ್ತಿದೆ. ಪ್ರಸ್ತುತ ಅಕ್ಷರ ಅಹಂಕಾರದ ಸಂಕೇತವಾಗಿದೆ. ಗ್ರಾಮೀಣರ ಜ್ಞಾನ ವಿನಯದ ಸಂಕೇತ. ಅಹಂಕಾರ ಅಳಿಸಿ, ಜ್ಞಾನದ ಸಂಕೇತ, ಮೌಲ್ಯ ಕಾಪಾಡಬೇಕಾದ ಜವಾಬ್ದಾರಿ ಇಂದಿನ ಯುವಕರು ಮತ್ತು ಸಾಹಿತಿಗಳ ಮೇಲಿದೆ ಎಂದರು.
ಶಾಸಕ ಕೆ.ಎನ್.ರಾಜಣ್ಣ, ‘ಕರೀಗೌಡ ಬೀಚನಹಳ್ಳಿ ಹಳ್ಳಿಗಾಡಿನ ಸೊಗಡನ್ನು ಸಾಹಿತ್ಯದ ಮೂಲಕ ಓದುಗರಿಗೆ ಪರಿಚಯಿಸುತ್ತಿದ್ದಾರೆ. ಅವರ ಕೃತಿಗಳಲ್ಲಿ ಗ್ರಾಮೀಣ ಜನರ ಜೀವನ ಕಾಣಬಹುದು. ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ, ಓದುವ ಹವ್ಯಾಸ ಬೆಳೆಸಬೇಕು’ ಎಂದು ಹೇಳಿದರು.
ಬೆಂಗಳೂರಿನ ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ, ಸಮ್ಮೇಳನಾಧ್ಯಕ್ಷ ಕರೀಗೌಡ ಬೀಚನಹಳ್ಳಿ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಪದಾಧಿಕಾರಿಗಳಾದ ಡಿ.ಎನ್.ಯೋಗೀಶ್ವರಪ್ಪ, ಎಂ.ಎಚ್.ನಾಗರಾಜು, ಮುಖಂಡರಾದ ಎಚ್.ಜಿ.ಚಂದ್ರಶೇಖರ್, ಡಾ.ಎಸ್.ಪರಮೇಶ್, ಧನಿಯಾಕುಮಾರ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.