ADVERTISEMENT

ಕನ್ನಡ ಸಂಘಟನೆಗಳು ಕಮಿಷನ್‌ಗೆ ಸೀಮಿತ: ಕರವೇ ಯುವಸೇನೆ ಹರೀಶ್

ಕರವೇ ಯುವಸೇನೆ ಜಿಲ್ಲಾ ಘಟಕದ ಉದ್ಘಾಟನೆಯಲ್ಲಿ ಆರೋಪ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 3:32 IST
Last Updated 8 ಫೆಬ್ರುವರಿ 2021, 3:32 IST
ಕಾರ್ಯಕ್ರಮವನ್ನು ಕರವೇ ಯುವಸೇನೆ ರಾಜ್ಯ ಘಟಕದ ಅಧ್ಯಕ್ಷ ಹರೀಶ್ ಉದ್ಘಾಟಿಸಿದರು
ಕಾರ್ಯಕ್ರಮವನ್ನು ಕರವೇ ಯುವಸೇನೆ ರಾಜ್ಯ ಘಟಕದ ಅಧ್ಯಕ್ಷ ಹರೀಶ್ ಉದ್ಘಾಟಿಸಿದರು   

ತುಮಕೂರು: ಕನ್ನಡ ನಾಡು, ನುಡಿ, ನೆಲ, ಜಲ ಸಂರಕ್ಷಣೆಯ ಹೆಸರಿನಲ್ಲಿ ಹುಟ್ಟಿಕೊಂಡ ಅನೇಕ ಕನ್ನಡ ಸಂಘಟನೆಗಳು ಇಂದು ಕಮಿಷನ್ ಸಂಘಟನೆಗಳಾಗಿ ರೂಪಾಂತರಗೊಂಡಿವೆ. ಇವುಗಳಿಗೆ ಪರ್ಯಾಯವಾಗಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ನಿಜವಾದ ಕನ್ನಡ ರಕ್ಷಣೆಯ ಕೆಲಸ ಮಾಡುತ್ತಿದೆ ಎಂದು ಕರವೇ ಯುವಸೇನೆಯ ರಾಜ್ಯ ಘಟಕದ ಅಧ್ಯಕ್ಷ ಹರೀಶ್ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ಯುವಸೇನೆಯು ಆಯೋಜಿಸಿದ್ದ ಜಿಲ್ಲಾ ಘಟಕದ ಉದ್ಘಾಟನೆ ಮತ್ತು ಪದಾಧಿಕಾರಿಗಳ ನೇಮಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆಲವು ಸಂಘಟನೆಗಳು ಜಿಲ್ಲಾ, ತಾಲ್ಲೂಕು ಪದಾಧಿಕಾರಿಗಳ ಮೂಲಕ ಇಂತಿಷ್ಟು ಹಣಕ್ಕೆ ಬೇಡಿಕೆ ಇಟ್ಟು ಕಮಿಷನ್ ದಂಧೆಯಲ್ಲಿ ತೊಡಗಿವೆ. ಆದರೆ ಕರವೇ ಯುವಸೇನೆ ಅಂತಹ ಹೀನ ಕೃತ್ಯಗಳಿಗೆ ಕೈಹಾಕದೆ, ಪದಾಧಿಕಾರಿಗಳು ತಮ್ಮ ಕೈಯಿಂದ ಹಣ ಹಾಕಿ ಭಾಷೆ, ನೆಲ,ಜಲದ ವಿಚಾರದಲ್ಲಿ ಹೋರಾಟದಲ್ಲಿ ತೊಡಗಿದ್ದಾರೆ ಎಂದರು.

ADVERTISEMENT

ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಮಾತನಾಡಿ, ಮುಂದಿನ ಒಂದು ತಿಂಗಳಲ್ಲಿ ಜಿಲ್ಲೆಯ 10 ತಾಲ್ಲೂಕುಗಳಲ್ಲಿ ಘಟಕಗಳನ್ನು ರಚಿಸಲಾಗುವುದು ಎಂದು ಹೇಳಿದರು.

ಜಿಲ್ಲಾಧ್ಯಕ್ಷ ವಿ.ಎಲ್.ಆನಂದ್ ಮಾತನಾಡಿದರು. ಜಿಲ್ಲಾಧ್ಯಕ್ಷ ವಿ.ಎಲ್.ಆನಂದ್, ಉಪಾಧ್ಯಕ್ಷ ಕೇಶವ್, ಸಂಘಟನಾ ಕಾರ್ಯದರ್ಶಿ ಚೇತನ್ ಮತ್ತು ವಿದ್ಯಾರ್ಥಿ ಘಟಕದ ಅಧ್ಯಕ್ಷ ರವಿಕಿರಣ್ ಅವರಿಗೆ ನೇಮಕಾತಿ ಪತ್ರ ನೀಡಲಾಯಿತು.

ಯುವಸೇನೆ ರಾಜ್ಯ ಉಪಾಧ್ಯಕ್ಷ ಪ್ರದೀಪ್‍ಕುಮಾರ್, ಮಹಿಳಾ ಘಟಕದ ರೂಪಾ, ರಮೇಶ್, ಯಲ್ಲೇಶಗೌಡ, ಅರುಣ್‍ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.