
ತುಮಕೂರಿನಲ್ಲಿ ಭಾನುವಾರ ಕನ್ನಡಸೇನೆ ಸಂಘಟನೆಯ ಬೆಳ್ಳಿಹಬ್ಬ ಆಚರಿಸಲಾಯಿತು.
ತುಮಕೂರು: ಭಾಷಾವಾರು ರಾಜ್ಯಗಳು ವಿಂಗಡಣೆಯಾಗಿ ಹಲವು ವರ್ಷಗಳು ಕಳೆದರೂ, ಇದುವರೆಗೆ ಆಡಳಿತ ನಡೆಸಿದ ಸರ್ಕಾರ ಕನ್ನಡ ಭಾಷೆ, ಸಂಸ್ಕೃತಿ ಎತ್ತಿ ಹಿಡಿಯುವ ಕೆಲಸ ಮಾಡಲಿಲ್ಲ ಎಂದು ಕನ್ನಡಪರ ಹೋರಾಟಗಾರ, ಚಲನಚಿತ್ರ ನಿರ್ಮಾಪಕ ಸಾ.ರಾ.ಗೋವಿಂದು ಹೇಳಿದರು.
ನಗರದಲ್ಲಿ ಭಾನುವಾರ ನಡೆದ ಕನ್ನಡಸೇನೆ ಸಂಘಟನೆಯ ಬೆಳ್ಳಿಹಬ್ಬ, ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾವೇರಿ, ಮಹದಾಯಿ ಸಮಸ್ಯೆ ಬಗೆಹರಿಸಲಿಲ್ಲ. ಕನ್ನಡಿಗರಿಗೆ ಉದ್ಯೋಗ ದೊರಕಿಸುವ ಪ್ರಯತ್ನ ಮಾಡಲಿಲ್ಲ. ಕನ್ನಡದ ಸಮಸ್ಯೆಗಳಿಗೆ ಪರಿಹಾರ ದೊರಕಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಂಗನಹಳ್ಳಿ ಕಾಶಿ ಅನ್ನಪೂರ್ಣೇಶ್ವರಿ ಸಂಸ್ಥಾನದ ಬಸವಮಹಾಲಿಂಗ ಸ್ವಾಮೀಜಿ, ‘ಮಾತೃಭಾಷೆ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ನಾಡು, ನುಡಿ, ನೆಲ, ಜಲ ರಕ್ಷಣೆಗೆ ಸಂಕಲ್ಪ ಮಾಡಬೇಕು. ಕನ್ನಡದ ಬಗ್ಗೆ ಮಕ್ಕಳಲ್ಲಿ ಪ್ರೀತಿ, ಅಭಿಮಾನ ಬೆಳೆಸಬೇಕು’ ಎಂದು ಸಲಹೆ ಮಾಡಿದರು.
ಕನ್ನಡಸೇನೆ ರಾಜ್ಯ ಅಧ್ಯಕ್ಷ ಕೆ.ಆರ್.ಕುಮಾರ್, ‘ಡಾ.ರಾಜಕುಮಾರ್ ಅವರು ಕನ್ನಡ ಚಳವಳಿಗೆ ಶಕ್ತಿ ತುಂಬಿದರು. ಕನ್ನಡಪರ ಸಂಘಟನೆಗಳ ಹೋರಾಟಗಳಿಗೆ ಪ್ರೇರಣೆಯಾದರು. ಕನ್ನಡದ ಸಮಸ್ಯೆಗೆ ಎಲ್ಲರು ಒಂದಾಗಿ ಹೋರಾಟ ನಡೆಸಬೇಕು’ ಎಂದು ಹೇಳಿದರು.
ನಟ ರಾಜು ನಾಯ್ಡು, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ, ಕನ್ನಡಸೇನೆ ರಾಜ್ಯ ಉಪಾಧ್ಯಕ್ಷ ಕುಬೇರ ಶೆಟ್ಟರು, ಜಿಲ್ಲಾ ಅಧ್ಯಕ್ಷ ಧನಿಯಾಕುಮಾರ್, ಹರಿಕಥಾ ವಿದ್ವಾನ್ ಲಕ್ಷ್ಮಣದಾಸ್, ಮುಖಂಡರಾದ ಪಾಪಣ್ಣ, ಟಿ.ಪಿ.ಮಂಜುನಾಥ್, ಎಂ.ಕೆ.ವೆಂಕಟಸ್ವಾಮಿ, ಎಂ.ನಾಗರಾಜು, ಟಿ.ಕೆ.ಆನಂದ್, ಗಿರಿಜಾ ಧನಿಯಾಕುಮಾರ್, ನೇತಾಜಿ ಶ್ರೀಧರ್, ಆರ್.ಎನ್.ವೆಂಕಟಾಚಲ, ವಿಠಲ್, ಪಾವಗಡ ಶ್ರೀರಾಮ್, ಶಬ್ಬೀರ್ ಅಹ್ಮದ್, ಹೊಸಕೋಟೆ ನಟರಾಜ್, ಶಾಂತಕುಮಾರ್, ಮಂಜೇಶ್ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.