
ಕೊರಟಗೆರೆ: ‘ಪೊಲೀಸ್ ಇಲಾಖೆ ಎಂದರೆ ಕೇವಲ ಕರ್ತವ್ಯವಲ್ಲ, ವ್ರತ. ಸದಾ ಒತ್ತಡ, ರಾತ್ರಿ-ಹಗಲು ಪಾಳಿಗಳ ನಡುವೆ ಕೆಲಸ ಮಾಡುತ್ತಿರುವ ನಮ್ಮ ಸೇವೆ ಸಮಾಜದ ಶಾಂತಿಯ ಮೂಲಸ್ತಂಭ’ ಎಂದು ಕಮಾಂಡೆಂಟ್ ಹಂಜಾ ಹುಸೇನ್ ಹೇಳಿದರು.
ತಾಲ್ಲೂಕಿನ ತುಂಬುಗಾನಹಳ್ಳಿಯ 12ನೇ ಪೊಲೀಸ್ ಮೀಸಲು ಪಡೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದರು.
ನಿವೃತ್ತ ಪೊಲೀಸ್ ಅಧಿಕಾರಿ ಕೆ.ಎನ್.ನಾರಾಯಣಸ್ವಾಮಿ ಮಾತನಾಡಿ, ನಿರಂತರ ಕಲಿಕೆ ಮತ್ತು ಆತ್ಮಪರಿಶೀಲನೆ ಒತ್ತಡ ನಿರ್ವಹಣೆಗೆ ಸಹಾಯಕ. ಯೋಗ, ವ್ಯಾಯಾಮ ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತವೆ. ಶಿಸ್ತಿನಲ್ಲಿರುವ ಸಂಘಟನೆಯೇ ಸದೃಢವಾಗಿರುತ್ತದೆ ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ(ಕಾನೂನು ಸುವ್ಯವಸ್ಥೆ) ಎಂ.ಎಲ್.ಪುರುಷೋತ್ತಮ ಮಾತನಾಡಿ, ಇಲಾಖೆಯ ಶಿಸ್ತು, ನೈತಿಕತೆ ಮತ್ತು ಪಾರದರ್ಶಕತೆ ದೊಡ್ಡ ಆಯುಧಗಳು. ಜನರೊಂದಿಗೆ ಮಾನವೀಯತೆ, ಕರ್ತವ್ಯದಲ್ಲಿ ಕಟ್ಟುನಿಟ್ಟು ಈ ಎರಡರ ಸಮತೋಲನವೇ ಉತ್ತಮ ಪೊಲೀಸ್ ಅಧಿಕಾರಿಯ ಗುರುತು ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ಗೋಪಾಲ್ ಮಾತನಾಡಿ,‘ ಒತ್ತಡದ ಸಂದರ್ಭಗಳಲ್ಲಿ ತಾಳ್ಮೆ ಕಳೆದುಕೊಳ್ಳದೆ ಕಾನೂನು ಪ್ರಕಾರ ನಡೆದುಕೊಳ್ಳುವುದು ನಮ್ಮ ಶಿಸ್ತು. ನಾವು ಕೇವಲ ಕಾನೂನನ್ನು ಜಾರಿಗೊಳಿಸುವವರಲ್ಲ. ಜನರಲ್ಲಿ ಭದ್ರತಾ ಭಾವನೆ ಮೂಡಿಸುವವರೂ ಹೌದು’ ಎಂದರು.
ಡಿಆರ್ ಡಿವೈಎಸ್ಪಿ ಪರಮೇಶ್ ಮಾತನಾಡಿ, ಯಾವುದೇ ಸವಾಲು ಬಂದರೂ ನಿಯಮಬದ್ಧ ಕಾರ್ಯಾಚರಣೆ ಮತ್ತು ನೈತಿಕ ಮೌಲ್ಯಗಳಿಂದ ದೂರ ಸರಿಯಬಾರದು. ಪೊಲೀಸ್ ಸೇವೆ ಎಂದರೆ ಶಿಸ್ತಿನ ಜೀವನಶೈಲಿ. ಒತ್ತಡ ನಮ್ಮ ವೃತ್ತಿಯ ಅವಿಭಾಜ್ಯ ಭಾಗವಾದರೂ ಅದನ್ನು ಧೈರ್ಯದಿಂದ ಎದುರಿಸುವ ಮನೋಬಲ ಇರಬೇಕು ಎಂದರು.
ಡೆಪ್ಯುಟಿ ಕಮಾಂಡೆಂಟ್ ಎಚ್.ವಿ. ನವೀನ್ ಕುಮಾರ್ ಮಾತನಾಡಿ, ‘ನಮ್ಮ ಪೊಲೀಸ್ ಪಡೆ ರಾಜ್ಯದಲ್ಲೇ ಮಾದರಿಯಾಗಿದೆ. ಅದರ ಆರಂಭ ಪ್ರತಿಯೊಬ್ಬ ಸಿಬ್ಬಂದಿಯಿಂದಲೇ. ಒತ್ತಡದ ನಡುವೆಯೂ ಸಹನಶೀಲತೆ, ಸಾರ್ವಜನಿಕರೊಂದಿಗೆ ಸೌಜನ್ಯ ಮತ್ತು ಕರ್ತವ್ಯನಿಷ್ಠೆ. ಇಲಾಖೆಯ ಆಂತರಿಕ ಶಿಸ್ತು, ಸಮಯಪಾಲನೆ ಮತ್ತು ಮೇಲಧಿಕಾರಿಗಳ ಸೂಚನೆ ಪಾಲನೆ ಪ್ರಗತಿಗೆ ದಾರಿ’ ಎಂದರು.
ಡಿಪ್ಯುಟಿ ಕಮಾಂಡೆಂಟ್ ನಿಸಾರ್ ಅಹಮದ್, ಪರಿಸರ ಪ್ರೇಮಿ ರಘುನಂದನ್, ಉದ್ಯಮಿಗಳಾದ ಶೈಲೇಶ್, ಇರ್ಫಾನ್, ತುಳಸಿಪ್ರಸನ್ನ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.