ತುಮಕೂರು: ಕುವೆಂಪು ನಾಟಕೋತ್ಸವಕ್ಕೆ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸೋಮವಾರ ಸಂಜೆ ಚಾಲನೆ ನೀಡಲಾಯಿತು. ಡಿ. 29ರಂದು ನಾಟಕೋತ್ಸವಕ್ಕೆ ತೆರೆ ಬೀಳಲಿದೆ.
ಮೊದಲ ದಿನ ರಂಗ ಕಹಳೆ ಸಂಸ್ಥೆಯಿಂದ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ಮತ್ತು ‘ಮೋಡಣ್ಣನ ತಮ್ಮ’ ನಾಟಕಗಳು ಯಶಸ್ವಿಯಾಗಿ ಪ್ರದರ್ಶನ ಕಂಡವು. ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ನಾಟಕ ಕಣ್ತುಂಬಿಕೊಂಡರು. ಕಲಾವಿದರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ರಂಗ ಕಹಳೆ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಾಟಕೋತ್ಸವ ಏರ್ಪಡಿಸಲಾಗಿದೆ.
ಜಿ.ಪಂ ಸಿಇಒ ಕೆ. ವಿದ್ಯಾಕುಮಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಕುವೆಂಪು ಅವರ ಸಾಹಿತ್ಯ, ನಾಟಕಗಳುಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತ ಹಾಗೂ ಅಗತ್ಯವಾಗಿವೆ. ಮಕ್ಕಳ ಮನೋವಿಕಾಸಕ್ಕಾಗಿ ಕುವೆಂಪು ಅವರ ಮಕ್ಕಳ ನಾಟಕಗಳು ಶಾಲಾ ಪಠ್ಯದಲ್ಲೂ ಸೇರಬೇಕು’ ಎಂಬ ಆಶಿಸಿದರು.
ಹರಿಕಥಾ ವಿದ್ವಾನ್ ಲಕ್ಷ್ಮಣದಾಸ್, ‘ಕುವೆಂಪು ಮಹಾಕವಿ. ಶಿಶು ಸಾಹಿತ್ಯದಿಂದ ಹಿಡಿದು ಮಹಾ ಕಾವ್ಯದ ವರೆಗೆ ಅವರು ರಚಿಸದೇ ಇರುವ ಕಾವ್ಯಗಳೇ ಇಲ್ಲ’ ಎಂದು ಹೇಳಿದರು.
ಲೇಖಕಿ ಬಾ.ಹ. ರಮಾಕುಮಾರಿ, ‘ಪ್ರಕೃತಿ ಮತ್ತು ಮಾನವ ಸಂಬಂಧಗಳು ಹಾಗೂ ನಿಸರ್ಗದ ಜೊತೆಗೆ ಮನುಷ್ಯ ಹೇಗೆ ಬಾಳಬೇಕು ಎಂಬುದನ್ನು ಕುವೆಂಪು ಕೃತಿಗಳು ಸಾರುತ್ತವೆ’ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಮಾತನಾಡಿದರು. ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ರೇವಣ್ಣ, ‘ಪ್ರಜಾವಾಣಿ’ಯ ವಿಶೇಷ ವರದಿಗಾರ ಕೆ.ಜೆ. ಮರಿಯಪ್ಪ, ನಾಟಕ ಮನೆ ಮಹಾಲಿಂಗು,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.