ADVERTISEMENT

ಕುಣಿಗಲ್ | ಒಂದೇ ದಿನ 25 ಸೋಂಕಿತರು ಪತ್ತೆ; ಬೆಚ್ಚಿ ಬಿದ್ದ ಜನ

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 4:24 IST
Last Updated 21 ಜುಲೈ 2020, 4:24 IST
   

ಕುಣಿಗಲ್: ತಾಲ್ಲೂಕಿನಲ್ಲಿ ಪ್ರಥಮ ಬಾರಿಗೆ ಒಂದೇ ದಿನ 25 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಒಬ್ಬರು ಮೃತಪಟ್ಟಿದ್ದಾರೆ.

ಬಹುತೇಕ ಪ್ರಕರಣಗಳಲ್ಲಿ ಈ ಹಿಂದೆ ಸೋಂಕಿತರಾಗಿದ್ದ ಕುಟುಂಬದ ಸದಸ್ಯರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಪಟ್ಟಣದಲ್ಲಿ 15 ಮಂದಿಗೆ ಸೋಂಕು ದೃಢಪಟ್ಟಿದೆ. ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ ಸೋಂಕಿನಿಂದ ಮೃತಪಟ್ಟಿದ್ದ ವ್ಯಕ್ತಿಯ ಸೊಸೆ ಮತ್ತು ಮೊಮ್ಮಗಳಿಗೆ, ಮಿಷನ್ ಕಾಪೌಂಡ್‌ನಲ್ಲಿ ಸೋಂಕಿತರಾಗಿದ್ದ ವ್ಯಕ್ತಿಯ ಪತ್ನಿ, ಕೋಟೆ ಪ್ರದೇಶದಲ್ಲಿ ಸೋಂಕಿತಳಾಗಿದ್ದ ಯುವತಿಯ ತಂದೆ ಮತ್ತು ತಾಯಿ, ಸಂಬಂಧಿ, ಮದ್ದೂರು ರಸ್ತೆಯ ಸೋಂಕಿತ ವ್ಯಕ್ತಿಯ ಪತ್ನಿಯಲ್ಲಿ ಸೋಂಕು ದೃಢವಾಗಿದೆ.

ಸಾರ್ವಜನಿಕ ಆಸ್ಪತ್ರೆ ಮುಂಭಾಗದ ಹೋಟೆಲ್ ಮಾಲೀಕನಿಗೆ, ತಾಲ್ಲೂಕು ಪಂಚಾಯಿತಿಯ ನರೇಗಾ ಸಹಾಯಕ ನಿರ್ದೇಶಕರಿಗೂ ಸೋಂಕು ದೃಢಪಟ್ಟಿದೆ.

ADVERTISEMENT

ಪಟ್ಟಣದ ವಾನಂಬಾಡಿಯ ಕಾಲೊನ, ಕುಂಬಾರಬೀದಿಯಲ್ಲಿ ಒಬ್ಬರು, ಕುವೆಂಪು ನಗರದಲ್ಲಿ 4, ಎಡೆಯೂರು ದೇವಾಲಯ ರಸ್ತೆ, ಬೆಣಚಕಲ್ಲು, ಬಿಳಿದೇವಾಲಯ, ಬೋರೆಗೌಡನಪಾಳ್ಯ, ಕೆಂಪಸಾಗರ, ಜಿನ್ನಾಗರ, ಯಡವಾಣಿ, ಮಾದಪ್ಪನಪಾಳ್ಯ, ಕೊತ್ತಗೆರೆ, ಸಂತೆಮಾವತ್ತೂರು ಪ್ರದೇಶಗಳಲ್ಲಿ ತಲಾ ಒಂದು ಪ್ರಕರಣಗಳು ದೃಢಪಟ್ಟಿವೆ.

‘ಸೋಂಕಿತರನ್ನು ತಾಲ್ಲೂಕಿನ ಮಲ್ಲನಾಯಕನಹಳ್ಳಿ ಕೋವಿಡ್ ಕೇರ್ ಸೆಂಟರ್ ಮತ್ತು ತುಮಕೂರು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲ ಸೋಂಕಿತರು ತಪ್ಪು ಮಾಹಿತಿ ಮತ್ತು ಮೋಬೈಲ್ ನಂಬರ್ ನೀಡಿದ್ದು, ಪತ್ತೆ ಹಚ್ಚಲು ಪರದಾಡಬೇಕಾಯಿತು’ ಎಂದು ವೈದ್ಯಾಧಿಕಾರಿ ಜಗದೀಶ್ ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ಸೋಂಕಿತರು ಹೆಚ್ಚಾಗುತ್ತಿದ್ದು, ನಿಯಂತ್ರಣಕ್ಕೆ ಅಧಿಕಾರಿ ವರ್ಗದವರು ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಬೇಕು ಮತ್ತು ನಾಗರಿಕರು ಎಚ್ಚರಿಕೆಯ ಕ್ರಮಗಳನ್ನು ಅನುಸರಿಸಬೇಕಾಗಿದೆ ಮತ್ತು ತಾಲ್ಲೂಕು ಆಡಳಿತದ ಜತೆ ಸಹಕರಿಸಬೇಕು ಎಂದು ತಹಶೀಲ್ದಾರ್ ವಿಶ್ವನಾಥ್ ಮನವಿ ಮಾಡಿದ್ದಾರೆ.

ಸೋಂಕಿತರಾಗಿದ್ದು, ತುಮಕೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಟ್ಟಣದ 6ನೇ ವಾರ್ಡ್‌ನ ವ್ಯಕ್ತಿ ಮೃತಪಟ್ಟಿದ್ದಾರೆ. ತುಮಕೂರಿನಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.