
ಕುಣಿಗಲ್: ಪಟ್ಟಣದ ಚಿಕ್ಕಕೆರೆ ಮತ್ತು ದೊಡ್ಡಕೆರೆ ಏರಿ ಬಳಿ ಕಸ ಸಂಗ್ರಹ ಹೆಚ್ಚಾಗುತ್ತಿದೆ. ವಿಲೇವಾರಿಗೆ ಗಮನಹರಿಸದೆ ಕೆರೆಗೆ ಸರಿಸುವ ಪರಿಪಾಠ ಪ್ರಾರಂಭವಾಗಿದ್ದು, ಸಂಬಂಧಪಟ್ಟವರು ಗಮನ ಹರಿಸಲು ನಾಗರಿಕರು ಮನವಿ ಮಾಡಿದ್ದಾರೆ.
ಪಟ್ಟಣದ ಉತ್ತರ ಮತ್ತು ದಕ್ಷಿಣ ಭಾಗಕ್ಕೆ ಕಳಸಪ್ರಾಯವಾಗಿರುವ ಚಿಕ್ಕಕೆರೆ ಮತ್ತು ದೊಡ್ಡಕೆರೆ ವ್ಯಾಪ್ತಿಯ ಪ್ರದೇಶಗಳು ಕಸ ಮತ್ತು ತ್ಯಾಜ್ಯಗಳ ಸಂಗ್ರಹ ಕೇಂದ್ರವಾಗುತ್ತಿದೆ. ಕಸ ಹೆಚ್ಚಾದಂತೆ ತೆರವುಗೊಳಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸದ ಕಾರಣ ಕಸ ಹೆಚ್ಚಾದಂತೆ ಕ್ರಮೇಣವಾಗಿ ಕಸ ಕೆರೆಗಳನ್ನು ಸೇರುತ್ತಿದೆ. ನೀರು ಕುಲುಷಿತಗೊಳ್ಳುವುದರ ಜತೆಗೆ ಜಲಚರಗಳಿಗೂ ಹಾನಿಯಾಗುತ್ತಿದೆ.
ತುಮಕೂರು ಕಡೆಗಳಿಂದ ಬರುವ ವಾಹನಗಳಿಗೆ ದೊಡ್ಡಕೆರೆ ವ್ಯಾಪ್ತಿಯ ಮತ್ತು ಮೈಸೂರು ಕಡೆಗಳಿಂದ ಬರುವ ವಾಹನಗಳಿಗೆ ತಾಲ್ಲೂಕಿನ ಪ್ರವೇಶದ್ವಾರದಲ್ಲಿರುವ ಸ್ವಾಗತ ಫಲಕದಡಿಯಲ್ಲಿಯೇ ಕಸದ ರಾಶಿಗಳು ಸ್ವಾಗತ ಕೋರುತ್ತಿದೆ.
ದೊಡ್ಡಕೆರೆ ವ್ಯಾಪ್ತಿಯ ಏರಿ, ಕೋಡಿ ಮತ್ತು ನಾಲಾ ತೂಬುಗಳ ಪ್ರದೇಶದಲ್ಲಿ ಕಸದ ಜತೆಗೆ ಮದ್ಯದ ಖಾಲಿ ಬಾಟಲಿ, ಬಟ್ಟೆಗಳ ಮೂಟೆ ಮತ್ತು ದೇವರ ಹಳೆ ಫೋಟೊ ರಾಶಿ ಇದ್ದರೆ, ಚಿಕ್ಕಕೆರೆ ವ್ಯಾಪ್ತಿಯಲ್ಲಿ ಕೋಳಿ ತ್ಯಾಜ್ಯದ ಜತೆಗೆ ಕಸದ ರಾಶಿ ಕಂಡು ಬರುತ್ತಿದೆ. ನಾಗರಿಕರು ತಮಗೆ ಬೇಡದ ಬಟ್ಟೆಗಳನ್ನು ಗಂಟುಮೂಟೆ ಕಟ್ಟಿ ತಂದು ಎಸೆಯುತ್ತಿರುವುದು ಪೌರ ಕಾರ್ಮಿಕರಿಗೆ ಸಮಸ್ಯೆಯಾಗಿದೆ.
ಕುಣಿಗಲ್ ದೊಡ್ಡಕೆರೆ ನೀರನ್ನು ಪಟ್ಟಣದ ಜನತೆಗೆ ಕುಡಿಯಲು ನೀಡಲಾಗುತ್ತಿದೆ. ಮೊದಲೇ ಶುದ್ಧೀಕರಣದ ಸಮಸ್ಯೆಯಿಂದ ಜನತೆಗೆ ಕಲುಷಿತ ನೀರು ಸರಬರಾಜಾಗುತ್ತಿದ್ದು ಮತ್ತಷ್ಟೂ ಸಮಸ್ಯೆಗೆ ಕಾರಣವಾಗಿದೆ.
ಕೆರೆ, ಏರಿ, ನಾಲೆ, ತೂಬು ಮತ್ತು ಕೋಡಿ ಪ್ರೆದೇಶಗಳು ಹಾಳಾಗುತ್ತಿದೆ. ಕೆರೆ ಪರಿಸರ ಸಂರಕ್ಷಣೆಗೆ ಗಮನಹರಿಸುವಂತೆ ಶಾಸಕ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಬಜರಂಗ ದಳದ ಸಂಚಾಲಕ ಗಿರೀಶ್ ದೂರಿದರು.
ಎಲ್ಲರ ಗಮನ ದೊಡ್ಡಕೆರೆ ಮೇಲಿದೆ. ಅದರಷ್ಟೆ ಇತಿಹಾಸವಿರುವ ಚಿಕ್ಕಕೆರೆ ಬಹುತೇಕ ಒತ್ತುವರಿಯಾಗಿದೆ. ಜತೆಗೆ ಕಸ ಸೇರಿ ಇಡೀ ವಾತಾವರಣ ಕಳೆಗುಂದುತ್ತಿದ್ದು ಶಾಸಕರು ಸೇರಿದಂತೆ ಅಧಿಕಾರಿಗಳು ಕೆರೆಗಳ ಸಂರಕ್ಷಣೆ ಜತೆಗೆ ಸೌಂದರೀಕರಣಕ್ಕೆ ಗಮನಹರಿಸಿ ಕೆರೆಗಳ ಪಾವಿತ್ರ್ಯಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ಇನ್ನೂ ಕೆಶಿಫ್ ವತಿಯಿಂದ ಚಿಕ್ಕಕೆರೆ ಏರಿ ಬಳಿ ನಿರ್ಮಾಣವಾಗಿದ್ದ ಸುಂದರ ಉದ್ಯಾನ ನಿರ್ವಹಣೆ ಕೊರತೆಯಿಂದಾಗಿ ಹಾಳಾಗುತ್ತಿದೆ. ಗಮನಹರಿಸಲು ಕುಂಬಾರ ಸಂಘದ ಅಧ್ಯಕ್ಷ ರಮೇಶ್ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.