ಕುಣಿಗಲ್: ಪುರಸಭೆಯಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತವಿದ್ದರೂ, ಗುರುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ನಿಂದ ಗೆದ್ದು ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದ ಎರಡನೇ ವಾರ್ಡ್ ಸದಸ್ಯೆ ಮಂಜುಳಾ ಅಧ್ಯಕ್ಷರಾಗಿ ಮತ್ತು ಪಕ್ಷೇತರರಾಗಿ ಗೆದ್ದು ಕಾಂಗ್ರೆಸ್ ಬೆಂಬಲಿಸಿದ್ದ 22ನೇ ವಾರ್ಡ್ ಮಲ್ಲಿಪಾಳ್ಯ ಶ್ರೀನಿವಾಸ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
23 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್– 15, ಬಿಜೆಪಿ– 4, ಜೆಡಿಎಸ್– 2 ಮತ್ತು ಪಕ್ಷೇತರರಾಗಿ ಇಬ್ಬರು ಆಯ್ಕೆಯಾಗಿದ್ದರು.
15ನೇ ವಾರ್ಡ್ ಬಿಜೆಪಿ ಸದಸ್ಯ ಕೋಟೆ ನಾಗಣ್ಣ ಮೃತಪಟ್ಟಿದ್ದು, 7ನೇ ವಾರ್ಡ್ ಸದಸ್ಯತ್ವದ ಬಗ್ಗೆ ಗೊಂದಲ ಏರ್ಪಟ್ಟು, ಸುಪ್ರೀಂ ಕೋರ್ಟ್ ಮೆಟ್ಟಲೇರಿದೆ. ಇಬ್ಬರಿಗೂ ಸದಸ್ಯತ್ವದ ಬಗ್ಗೆ ದಾಖಲೆ ಒದಗಿಸಿದ್ದರೆ ಮಾತ್ರ ಅವಕಾಶ ನೀಡಲಾಗುವುದು. ಒಂದು ವೇಳೆ ದಾಖಲೆ ನೀಡದಿದ್ದರೆ ಖಾಲಿ ಸ್ಥಾನವೆಂದು ಪರಿಗಣಿಸಲಾಗುವುದು ಎಂದು ಅಧಿಕಾರಿಗಳು ಲಿಖಿತ ಸೂಚನೆ ನೀಡಿದ್ದರು. ಯಾರು ದಾಖಲೆ ಸಲ್ಲಿಸದ ಕಾರಣ ಖಾಲಿ ಸ್ಥಾನವೆಂದು ಘೋಷಿಸಲಾಯಿತು.
ಶಾಸಕ ರಂಗನಾಥ್, ಬೆಂಗಳೂರು ಗ್ರಾಮಾಂತರ ಸಂಸದ ಮಂಜುನಾಥ್ ಮತ್ತು 21 ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಬೇಕಿದ್ದು, ಕಾಂಗ್ರೆಸ್ನ ಜಯಲಕ್ಷ್ಮಿ, ಬಿಜೆಪಿಯ ಕೃಷ್ಣ, ಆನಂದ್ ಕಾಂಬ್ಳಿ ಮತ್ತು ಜಯಮ್ಮ, ಸಂಸದ ಡಾ.ಮಂಜುನಾಥ್ ಗೈರಾಗಿದ್ದರು.
ಶಾಸಕ ಡಾ.ರಂಗನಾಥ್ ಪ್ರತಿಕ್ರಿಯಿಸಿ, ನಾಗರಿಕರ ಆಸ್ತಿ ದಾಖಲೆಗಳನ್ನು ಪಡೆಯಲು ಪರದಾಡುತ್ತಿರುವುದನ್ನು ಕಂಡು ಸರ್ಕಾರದ ಗಮನ ಸೆಳೆದು ಇ- ಖಾತಾ ಆಂದೋಲನ ಪ್ರಾರಂಭಿಸಲಾಗಿದೆ. ಸದಸ್ಯರು ಪ್ರತಿಯೊಬ್ಬರಿಗೂ ಕಾನೂನು ಬದ್ಧವಾಗಿ ದಾಖಲೆಗಳನ್ನು ನೀಡಬೇಕು. ಪಕ್ಷಾತೀತವಾಗಿ ಶ್ರಮಿಸಿದ ಕಾರಣ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಡೆ ವಾಲುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಇನ್ನೂ ಹೆಚ್ಚಿನ ಸ್ಥಾನ ಗಳಿಸಲು ಮತ್ತು ಸದಸ್ಯರು ಮರು ಆಯ್ಕೆಯಾಗಲು ಜನರ ಸಮಸ್ಯೆಗೆ ಸ್ಪಂದಿಸಿ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಶಾಸಕ ಡಾ.ರಂಗನಾಥ್ ನೇತೃತ್ವದಲ್ಲಿ ಬಂದ ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಿದ್ದರು. ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಮುಖ್ಯಾಧಿಕಾರಿ ಮಂಜುಳಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.