ತುಮಕೂರು: ಸಂಗೀತವು ಸಾರ್ವತ್ರಿಕ ಭಾಷೆ ಆಗಿರುವುದರಿಂದ ಪ್ರತಿಯೊಬ್ಬರಿಗೂ ಅರ್ಥವಾಗುತ್ತದೆ ಎಂದು ಭಾರತ ಸರ್ಕಾರದ ಮಾಜಿ ರಾಯಭಾರಿ ಎನ್.ಪಾರ್ಥಸಾರಥಿ ತಿಳಿಸಿದರು.
ನಗರದ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ಆಯೋಜಿಸಿದ್ದ ವಿಶೇಷ ವಿಶ್ವ ಸಂಗೀತ ಕಾರ್ಯಕ್ರಮ ‘ಸ್ವರಸಂಗಮ’ ಉದ್ಘಾಟಿಸಿ ಮಾತನಾಡಿದರು.
ನಾದಬ್ರಹ್ಮದಿಂದ ಉದ್ಭವವಾದ ಸಂಗೀತವು ಮಾನವರಲ್ಲಿ, ಪ್ರಾಣಿಸಂಕುಲದಲ್ಲಿ ಮಾತ್ರವಲ್ಲದೆ ಎಲ್ಲ ಚರಾಚರ ವಸ್ತುಗಳಲ್ಲೂ ಭಾವಸ್ಫುರಣೆಗೊಳಿಸಬಲ್ಲದು. ಸಂಗೀತವು ಪ್ರಕೃತಿಯ ಎಲ್ಲ ವಸ್ತುಗಳಲ್ಲಿಯೂ ವ್ಯಕ್ತಗೊಳ್ಳುತ್ತಿದೆ ಎಂದರು.
ಗದಗ–ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಸಾನ್ನಿಧ್ಯ ವಹಿಸಿದ್ದರು. ಬೆಂಗಳೂರಿನ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಪ್ರತ್ಯಾಯನ ಪರಿಷತ್ತಿನ ನಿರ್ದೇಶಕ ಡಾ.ಎಸ್.ಸಿ ಶರ್ಮ ಅವರು ಸಂಗೀತ ತ್ರಿಮೂರ್ತಿ ಮುತ್ತುಸ್ವಾಮಿ ದೀಕ್ಷಿತರ ಕೀರ್ತನೆ ಹಾಡಿದರು.
ಅಂತರರಾಷ್ಟ್ರೀಯ ಸಂಗೀತ ಕಲಾವಿದರಾದ ನೆದರ್ಲ್ಯಾಂಡ್ನ ಫುಲ್ವಿಯೋ ಸಿಗುರ್ಟಾ ಅವರು ಟ್ರಂಪೆಟ್, ಇಟಲಿಯ ಗ್ಯುಲಿಯಾನೋ ಮೊಡರೆಲ್ಲಿ ಜಾಸ್ ಗಿಟಾರ್, ಲಂಡನ್ನಿನ ಅಲೈಸ್ ಬರೋನ್ ಪಾಶ್ಚಿಮಾತ್ಯ ಶಾಸ್ತ್ರೀಯ ವಯೋಲಿನ್, ಮೈಸೂರಿನ ಸುಮಂತ್ ಮಂಜುನಾಥ್ ವಯೋಲಿನ್, ಬೆಂಗಳೂರಿನ ಶಡ್ಜ ಗೋಡ್ಕಿಂಡಿ ಕೊಳಲು, ಬಿ.ಸಿ ಮಂಜುನಾಥ್ ಮೃದಂಗ, ಪ್ರಮಥ್ ಕಿರಣ್ ಖಂಜರ ಹಾಗೂ ವಿವೇಕ್ ಸಂತೋಷ್ ಕೀಬೋರ್ಡ್ ನುಡಿಸಿ ಈ ವಿಶೇಷ ವಿಶ್ವ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.