ಗುಬ್ಬಿ: ಸಾರ್ವಜನಿಕರು ಅನಗತ್ಯವಾಗಿ ಖಾಸಗಿ ವಾಹನ ಬಳಸದೆ ಪ್ರತಿನಿತ್ಯದ ಪ್ರಯಾಣಕ್ಕಾಗಿ ರಸ್ತೆ ಸಾರಿಗೆ ಬಸ್ಗಳನ್ನು ಬಳಸಬೇಕು. ಇದರಿಂದ ಪರಿಸರ ಮಾಲಿನ್ಯ ತಡೆಗಟ್ಟುವುದರ ಜೊತೆಗೆ ವೈಯಕ್ತಿಕ ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ಕರೆ ನೀಡಿದರು.
ಅವರು ಕಡಬದಿಂದ ನಿಟ್ಟೂರು ಮಾರ್ಗವಾಗಿ ಬೆಂಗಳೂರಿಗೆ ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೆ ಸ್ವತಃ ತಾವೇ ಬಸ್ ಚಲಾಯಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಗ್ರಾಮಾಂತರ ಭಾಗಗಳಿಂದ ರೈತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಮ್ಮ ಕೆಲಸದ ನಿಮಿತ್ತ ನಗರ ಪ್ರದೇಶಗಳಿಗೆ ಹೋಗಲು ಅನುಕೂಲ ಮಾಡುವ ನಿಟ್ಟಿನಲ್ಲಿ ಕೆಎಸ್ಆರ್ಟಿಸಿ ಬಸ್ ಸೇವೆ ಕಲ್ಪಿಸಲಾಗುತ್ತದೆ. ಪ್ರತಿದಿನ ಈ ಬಸ್ ಬೆಳಿಗ್ಗೆ 7.30ಕ್ಕೆ ಕಡಬದಿಂದ ಹೊರಟು 10.30ರ ವೇಳೆಗೆ ಬೆಂಗಳೂರು ತಲುಪುತ್ತದೆ ಎಂದರು.
ಕೊರೊನಾ ಹಿನ್ನೆಲೆಯಲ್ಲಿ ಸಾಕಷ್ಟು ಬಸ್ಗಳು ಗ್ರಾಮಾಂತರ ಭಾಗದಲ್ಲಿ ನಿಲುಗಡೆಯಾಗಿದ್ದು ಈಗ ಹಂತ ಹಂತವಾಗಿ ಸಂಚರಿಸುತ್ತಿವೆ. ಸರ್ಕಾರಿ ಬಸ್ಗಳನ್ನು ಓಡಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಇದರಿಂದ ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ವೆಂಕಟರಂಗಯ್ಯ, ಉಪಾಧ್ಯಕ್ಷೆ ಜಯಶ್ರೀ, ಸದಸ್ಯರಾದ ದರ್ಶನ್, ತಾ.ಪಂ. ಮಾಜಿ ಅಧ್ಯಕ್ಷ ಬಾಲಕೃಷ್ಣ, ಮುಖಂಡರಾದ ಯತೀಶ್, ಚಿಕ್ಕತಿಮ್ಮಯ್ಯ, ಮಂಜುನಾಥ್ ಮನುಗೌಡ, ಕೆಎಸ್ಆರ್ಟಿಸಿ ಡಿ.ಸಿ ಬಸವರಾಜ್, ಅಧಿಕಾರಿಗಳಾದ ಷರೀಫ್, ತುಳಸಿರಾಮ್, ತಾಲ್ಲೂಕು ಸಾರಿಗೆ ನಿಯಂತ್ರಣಾಧಿಕಾರಿ ನಾಗರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.