ADVERTISEMENT

ಕಾರ್ಮಿಕರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿ

ತುಮಕೂರು ತಾಲ್ಲೂಕಿನ ಸಿರಿವರ ಗ್ರಾ.ಪಂ. ಮಟ್ಟದ ಕಟ್ಟಡ ಕಾರ್ಮಿಕರ ಸಮಾವೇಶದಲ್ಲಿ ಬಿ.ಉಮೇಶ್ ಅಭಿಮತ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 17:15 IST
Last Updated 25 ಡಿಸೆಂಬರ್ 2018, 17:15 IST
ಸಭೆಯಲ್ಲಿ ಬಿ.ಉಮೇಶ್ ಮಾತನಾಡಿದರು
ಸಭೆಯಲ್ಲಿ ಬಿ.ಉಮೇಶ್ ಮಾತನಾಡಿದರು   

ತುಮಕೂರು: ಕಟ್ಟಡ ಕಾರ್ಮಿಕರು ಸುರಕ್ಷತೆ ಇಲ್ಲದೆ ಅನಾರೋಗ್ಯದಿಂದ ನರಳುತ್ತಿದ್ದಾರೆ. ಕಲ್ಯಾಣ ಮಂಡಳಿಯಿಂದ ದೊರೆಯುವ ಸೌಲಭ್ಯಗಳು ಸಹ ಸರಿಯಾದ ವೇಳೆಗೆ ದೊರೆಯುತ್ತಿಲ್ಲ. ಹಾಗಾಗಿ ಸರ್ಕಾರ ಈ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಉಮೇಶ್ ಒತ್ತಾಯಿಸಿದರು.

ಹೆಬ್ಬೂರು ಹೋಬಳಿಯ ಸಿರಿವರ ಗ್ರಾಮದಲ್ಲಿ ಪಂಚಾಯಿತಿ ಮಟ್ಟದ ಕಟ್ಟಡ ಕಾರ್ಮಿಕರ ಸಮಾವೇಶದಲ್ಲಿ ಮಾತನಾಡಿದರು.

ಕಲ್ಯಾಣ ಮಂಡಳಿಯ ಅಡಿಯಲ್ಲಿ ಸೌಲಭ್ಯಗಳು ಸಿಗುವಂತೆ ಕಾನೂನು ರೂಪಿಸಲಾಗಿದ್ದರೂ ಸಹ ಕಾರ್ಮಿಕರನ್ನು ತಲುಪುವಲ್ಲಿ ಸಂಪೂರ್ಣ ಯಶಸ್ವಿಯಾಗಿಲ್ಲ. ಇದಕ್ಕೆ ಸಿಬ್ಬಂದಿ ಕೊರತೆ, ಇಚ್ಛಾಶಕ್ತಿ ಕೊರತೆ, ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆ ಮತ್ತು ಸರ್ಕಾರ ಪರಸ್ಪರ ಸಹಕಾರವಿಲ್ಲದೆ ಇರುವುದೇ ಇದಕ್ಕೆ ಕಾರಣ. ಎಚ್.ಡಿ.ಕುಮಾರಸ್ವಾಮಿ ಅವರು ಹಿಂದೆ ಮುಖ್ಯಮಂತ್ರಿ ಆಗಿದ್ದ ಹಿಂದಿನ ಅವಧಿ ಈ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಈಗ ಅವರೇ ಮತ್ತೆ ಅಧಿಕಾರದಲ್ಲಿರುವುದರಿಂದ ಕಾಯ್ದೆ ಅನುಷ್ಠಾನಕ್ಕೆ ಹೆಚ್ಚಿನ ಆಸಕ್ತಿ ವಹಿಸುವಂತೆ ಆಗ್ರಹಿಸಿದರು.

ADVERTISEMENT

ಕಟ್ಟಡ ಕಾರ್ಮಿಕರಿಗೆ ವಸತಿ ಯೋಜನೆ, ಮಾಸಿಕ 3 ಸಾವಿರ ರೂಪಾಯಿ ಪಿಂಚಣಿ, ಹೊಸ ಉದ್ಯೋಗಗಳ ಸೃಷ್ಟಿಗೆ ಕೇಂದ್ರ ಸರ್ಕಾರ ಮಧ್ಯಪ್ರವೇಶ, ಮರಳು ಸಮಸ್ಯೆ ಪರಿಹಾರ, ಏರುತ್ತಿರುವ ಕಟ್ಟಡ ಸಾಮಗ್ರಿಗಳ ಬೆಲೆ ತಡೆಯುವ ಮೂಲಕ ಕೃಷಿಯ ನಂತರ ಉದ್ಯೋಗ ನೀಡಿರುವ ನಿರ್ಮಾಣ ವಲಯವನ್ನು ರಕ್ಷಿಸಬೇಕೆಂದು ಮನವಿ ಮಾಡಿದರು.

ಜಿಲ್ಲಾ ಸಹಕಾರ್ಯದರ್ಶಿ ರಾಮಣ್ಣ, ಶ್ರಮಿಕ ಕಟ್ಟಡ ಕಾರ್ಮಿಕ ಸಂಘಟನೆ ಮುಖಂಡ ಕೃಷ್ಣರಾಜು, ಸಂಘದ ಗೌರವಾಧ್ಯಕ್ಷ ಟಿ.ಎಂ.ಗೋವಿಂದರಾಜು, ಜಿಲ್ಲಾ ಮುಖಂಡರಾದ ಲಕ್ಷ್ಮಣ್, ನರಸಿಂಹಮೂರ್ತಿ ಮಾತನಾಡಿದರು.

ಜಿಲ್ಲಾ ಉಪಾಧ್ಯಕ್ಷ ಶಂಕರಪ್ಪ, ಲಕ್ಷ್ಮಣ್, ನಾಗರಾಜು, ಘಟಕದ ಉಪಾಧ್ಯಕ್ಷ ಗೋಪಾಲಕೃಷ್ಣ, ಮಹಿಳಾ ಮುಖಂಡರಾದ ಲಲಿತಮ್ಮ, ಸತ್ಯಮ್ಮ, ಲಕ್ಷ್ಮಮ್ಮ ಹಾಗೂ ಮಂಜಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.