ತುಮಕೂರು: ಲಾಕ್ಡೌನ್ನಿಂದ ಜಿಲ್ಲೆಯಾದ್ಯಂತ ಸಂಕಷ್ಟದಲ್ಲಿರುವ ಬೀದಿ ಬದಿ ವ್ಯಾಪಾರಿಗಳಿಗೆ ₹1 ಸಾವಿರದಿಂದ 10 ಸಾವಿರದವರೆಗೆ ಸಾಲ ನೀಡಲು ಡಿಸಿಸಿ ಬ್ಯಾಂಕ್ ಮುಂದಾಗಿದೆ.
ಜಿಲ್ಲಾ ಡಿಸಿಸಿ ಬ್ಯಾಂಕ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ 60 ಜನ ಬೀದಿ ಬದಿ ವ್ಯಾಪಾರಿಗಳಿಗೆ ನೇರವಾಗಿ ಅವರ ಶೂನ್ಯ ಉಳಿತಾಯ ಖಾತೆಗೆ ಸಾಲದ ಮೊತ್ತ ಜಮಾ ಮಾಡಿರುವ ಆದೇಶ ಪತ್ರಗಳನ್ನು ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ‘ಲಾಕ್ಡೌನ್ನಿಂದ ಬೀದಿ ಬದಿ ವ್ಯಾಪಾರಸ್ಥರು ಆರ್ಥಿಕ ಮುಗ್ಗಟ್ಟಿನಿಂದ ಕಷ್ಟಪಡುತ್ತಿದ್ದಾರೆ. ಜೀವನೋಪಾಯಕ್ಕೆ ಅನ್ಯ ಮಾರ್ಗವಿಲ್ಲದೆ ಖಾಸಗಿ ಲೇವಾದೇವಿ ಸಂಸ್ಥೆಯ ಶೋಷಣೆಗೆ ಒಳಗಾಗುತ್ತಿರುವುದನ್ನು ಅರಿತು ಬ್ಯಾಂಕ್ ಆಡಳಿತ ಮಂಡಳಿ ಈ ವ್ಯಾಪಾರಸ್ಥರಿಗೆ ಸಾಲ ನೀಡಲು ತೀರ್ಮಾನ ಕೈಗೊಂಡಿದೆ’ ಎಂದರು.
ಯಾವುದೇ ರೀತಿಯ ಆಧಾರ ಇಲ್ಲದೇ ಬಡವರ ಬಂಧು ಯೋಜನೆಯಡಿ ಸಾಲ ನೀಡಲಾಗುವುದು. ಜಿಲ್ಲೆಯ 10 ತಾಲ್ಲೂಕುಗಳ ನಿರ್ದೇಶಕರು ತಮ್ಮ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳಿಗೆ ತಾವುಗಳೇ ಸಾಲದ ಚೆಕ್ ವಿತರಿಸಬಹುದು. ಇದಕ್ಕೆ ಅಧ್ಯಕ್ಷರನ್ನು ಕಾಯುವ ಅಗತ್ಯವಿಲ್ಲ ಎಂದು ಹೇಳಿದರು.
ಬ್ಯಾಂಕ್ ನಿರ್ದೇಶಕರಾದ ಬಿ.ಶಿವಣ್ಣ, ನರಸಿಂಹಯ್ಯ, ಎಸ್.ಲಕ್ಷ್ಮಿನಾರಾಯಣ, ಜಿ.ಜೆ.ರಾಜಣ್ಣ, ಎಸ್.ಆರ್.ರಾಜಕುಮಾರ್,ಆರ್.ರಾಜೇಂದ್ರ, ಬಿ.ಎಸ್.ದೇವರಾಜು, ಎಚ್.ಟಿ.ತಿಮ್ಮರಾಜು, ಟಿ.ಪಿ.ಮಂಜುನಾಥ್, ಬ್ಯಾಂಕ್ ಅಧಿಕಾರಿ ಜಂಗಮಪ್ಪ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಎಸ್.ಕುಬೇಂದ್ರನಾಯ್ಕ, ಬ್ಯಾಂಕ್ ಮಹಾಪ್ರಬಂಧಕ ಪಿ.ಎಸ್.ರಾಮಕೃಷ್ಣನಾಯಕ್, ತಾಲ್ಲೂಕು ಮೇಲ್ವಿಚಾರಕ ಮಧುಸೂದನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.