ಹಾಗಲವಾಡಿ: ಹತ್ತು ವರ್ಷಗಳಿಂದ ವಿದ್ಯುತ್ ಸಮಸ್ಯೆ ಬಗೆಹರಿಸದೆ ಸಬೂಬು ಹೇಳುತ್ತಿದ್ದಾರೆ ಎಂದು ಆರೋಪಿಸಿದ ಶಿವರಾಂಪುರ ಗ್ರಾಮಸ್ಥರುಹೊಸಕೆರೆ ಬೆಸ್ಕಾಂ ಕಚೇರಿಗೆ ಬೀಗಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಮಕ್ಕೆ ಹಾಗಲವಾಡಿಯಿಂದ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮನವಿ ಮಾಡಿದ್ದರೂ, ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣದಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಒಂದಲ್ಲ ಒಂದು ನೆಪಹೇಳಿ ವಿದ್ಯುತ್ ನೀಡುತ್ತಿಲ್ಲ. ರೈತರಿಗೆ ಪಂಪ್ ಸೆಟ್ ಓಡಿಸಲು ಸಾಧ್ಯವಾಗುತ್ತಿಲ್ಲ. ಐದು
ವರ್ಷಗಳ ಹಿಂದೆಯೇ ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹಾಗಲವಾಡಿಯಿಂದ ಸ್ಥಳಪರಿಶೀಲನೆ ಸರ್ವೆ ಮಾಡಲಾಗಿತ್ತು. ಆದರೆ ಕಾಮಗಾರಿ ಈವರೆಗೆ ಆರಂಭವಾಗಿಲ್ಲ ಎಂದು ದೂರಿದರು.
ಶಿವರಾಂಪುರ ಗ್ರಾಮವು ಗುಬ್ಬಿ ತಾಲ್ಲೂಕಿನ ಗಡಿಗ್ರಾಮವಾಗಿದ್ದು, ಸೌಲಭ್ಯ ವಂಚಿತವಾಗಿದೆ. ಜನಪ್ರತಿನಿಧಿಗಳು ಗ್ರಾಮವನ್ನು ಕಡೆಗಣಿಸಿದ್ದಾರೆ. ಸಮಸ್ಯೆ ಬಗೆಹರಿಯುವವರೆಗೂ ಮುಷ್ಕರ ಕೈಬಿಡುವುದಿಲ್ಲ ಎಂದು ಪ್ರತಿಭಟನ ನಿರತರು ಹೇಳಿದರು.
ಎಇಇ ಅನಿಲ್ ಕುಮಾರ್ ಭೇಟಿನೀಡಿ ‘ತಿಂಗಳೊಳಗೆ ಸಮಸ್ಯೆ ಬಗೆಹರಿಸುತ್ತೇವೆ. ಒಂಬತ್ತು ಕಿ.ಮೀ. ಲಿಂಕ್ ಲೈನ್ ಎಳೆಯಬೇಕಾಗಿರುವ ಕಾರಣ ವಿಳಂಬವಾಗಿದೆ. ಕೋವಿಡ್ನಿಂದಾಗಿ ಟೆಂಡರ್ ಕರೆದಿರಲಿಲ್ಲ. ತುಮಕೂರು ವಿಭಾಗಕ್ಕೆ ₹ 40 ಕೋಟಿ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕೆಲಸ ಆರಂಭವಾಗುವುದಷ್ಟೇ ಬಾಕಿ ಇದೆ. ಜನವರಿ ಅಂತ್ಯದೊಳಗೆ ಕೆಲಸ ಮುಗಿಯಲಿದೆ’ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಗುರುರೇಣುಕಾರಾಧ್ಯ,ರಾಮಯ್ಯ, ಕೃಷ್ಣಮೂರ್ತಿ, ರಾಜಣ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.