ADVERTISEMENT

ಕುಣಿಗಲ್ | ನ್ಯಾಯಯುತ ಚುನಾವಣೆ: ಕರ್ಪೂರ ಹಚ್ಚಿ ಪ್ರಮಾಣ

ವೈಯುಕ್ತಿಕ ಕಾರಣಕ್ಕೆ ನಡೆಯುವ ಜಗಳಕ್ಕೆ ರಾಜಕೀಯ ಬಣ್ಣದ ಆರೋಪ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 14:34 IST
Last Updated 13 ಏಪ್ರಿಲ್ 2024, 14:34 IST
ಕುಣಿಗಲ್ ತಾಲ್ಲೂಕು ಹುತ್ರಿದುರ್ಗ ಹೋಬಳಿ ಕಾಂಗ್ರೆಸ್ ಮುಖಂಡರು ಶಾಂತಿಯುತ ಮತದಾನಕ್ಕಾಗಿ ಕರ್ಪೂರ ಹಚ್ಚಿ ಪ್ರಮಾಣ ಮಾಡಿದರು
ಕುಣಿಗಲ್ ತಾಲ್ಲೂಕು ಹುತ್ರಿದುರ್ಗ ಹೋಬಳಿ ಕಾಂಗ್ರೆಸ್ ಮುಖಂಡರು ಶಾಂತಿಯುತ ಮತದಾನಕ್ಕಾಗಿ ಕರ್ಪೂರ ಹಚ್ಚಿ ಪ್ರಮಾಣ ಮಾಡಿದರು    

ಕುಣಿಗಲ್: ಕಾಂಗ್ರೆಸ್‌ಗೆ ಕೆಟ್ಟ ಹೆಸರು ತರದೆ, ಯಾವುದೇ ದಬ್ಬಾಳಿಕೆ ನಡೆಸದೆ, ನ್ಯಾಯಯುತ ಚುನಾವಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ ಕಾಂಗ್ರೆಸ್ ಮುಖಂಡರು ಬೆಟ್ಟಹಳ್ಳಿ ಮಠದ ಉರಿಗದ್ದುಗೇಶ್ವರ ಗದ್ದುಗೆ ಮುಂದೆ ಶನಿವಾರ ಕರ್ಪೂರ ಹಚ್ಚಿ ಪ್ರಮಾಣ ಮಾಡಿದರು.

ಗ್ರಾಮ ಪಂಚಾಯಿತಿ ಸದಸ್ಯ ಹಾಲುವಾಗಿಲು ಸ್ವಾಮಿ ಮಾತನಾಡಿ, ಹೋಬಳಿಯಲ್ಲಿ ವೈಯುಕ್ತಿಕ ವಿಚಾರಕ್ಕೆ ನಡೆದ ಗಲಾಟೆಗಳಿಗೆ ಬಿಜೆಪಿ, ಜೆಡಿಎಸ್‌ ಮುಖಂಡರು ರಾಜಕೀಯ ಬಣ್ಣ ಬಳಿದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಿದ್ದಾರೆ. ಇದರಿಂದಾಗಿ ಪಕ್ಷ ಹಾಗೂ ಶಾಸಕ ಡಾ.ರಂಗನಾಥ್ ಅವರಿಗೂ ಕೆಟ್ಟ ಹೆಸರು ಬರುತ್ತಿದ್ದೆ. ಪಕ್ಷದ ಹಿತದೃಷ್ಟಿಯಿಂದ ಶಾಂತಿಯುತ, ನ್ಯಾಯಸಮ್ಮತ ಚುನಾವಣೆಗೆ ನಿರ್ಧರಿಸಲಾಗಿದೆ. ವಿರೋಧ ಪಕ್ಷದವರೂ ದೇಗುಲಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.

ತಾಲ್ಲೂಕಿನಲ್ಲಿ ಮೈತ್ರಿಕೂಟದ ಮುಖಂಡರ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರೋಪಿ ಬೋರೆಗೌಡ ಹಾಗೂ ಜೆಡಿಎಸ್ ಮುಖಂಡ ಮಂಜುನಾಥ್ ನಡುವೆ ಮೊಬೈಲ್‌ ವಿಚಾರವಾಗಿ ಗಲಾಟೆಯಾಗಿತ್ತು. ಇದಕ್ಕೆ ರಾಜಕೀಯ ಬಣ್ಣ ಬಳಿದು ಮೈತ್ರಿಕೂಟದ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋದ ಕಾರಣ  ಹಲ್ಲೆ ನಡೆಸಲಾಗಿದೆ ಎಂದು ಬಿಂಬಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ದೂರಿದರು.

ADVERTISEMENT

ವಿಎಸ್ಎಸ್ಎನ್ ಅಧ್ಯಕ್ಷ ದೇವರಾಜು, ಬೋರೆಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಕುಮಾರ್, ಆನಂದ್, ಮುಖಂಡರಾದ ರಮೇಶ್, ಗಂಗಾಧರ್, ಹುಚ್ಚೆಗೌಡ, ನಾರಾಯಣ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.