
ಮಧುಗಿರಿ ಪಟ್ಟಣದ ರಾಘವೇಂದ್ರ ಸರ್ಕಲ್ ನಲ್ಲಿ ತಂಗುದಾಣವಿಲ್ಲದೆ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಬಸ್ ಗಾಗಿ ನಿಂತು ಕಾಯುತ್ತಿರುವುದು.
ಮಧುಗಿರಿ: ಪಟ್ಟಣದ ಹಲವೆಡೆ ಬಸ್ ನಿಲ್ಲುವ ಸ್ಥಳಗಳಲ್ಲಿ ತಂಗುದಾಣವಿಲ್ಲದೆ ಪ್ರಯಾಣಿಕರು ನಿಂತು, ನಿಂತು ಸುಸ್ತಾಗುತ್ತಿದ್ದಾರೆ. ಅವಶ್ಯವಿರುವೆಡೆ ಶೀಘ್ರ ಹೈಟೆಕ್ ತಂಗುದಾಣಗಳನ್ನು ನಿರ್ಮಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪಟ್ಟಣ ಹಾಗೂ ಇತರೆಡೆಗಳಿಂದ ಬರುವ ಬಸ್ಗಳು ಪಟ್ಟಣದ ಹೃದಯಭಾಗ ರಾಘವೇಂದ್ರಸ್ವಾಮಿ ದೇವಸ್ಥಾನದ ಮುಂಭಾಗ, ಪಾವಗಡ ವೃತ್ತ, ಗೌರಿಬಿದನೂರು ವೃತ್ತದಲ್ಲಿ ಪ್ರಯಾಣಿಕರಿಗೆ ಕೂರಲು ತಂಗುದಾಣವಿಲ್ಲ. ಪಟ್ಟಣದ ಹಲವು ಬಸ್ಗಳು ತುಮಕೂರು, ಬೆಂಗಳೂರು, ಗೌರಿಬಿದನೂರು, ಶಿರಾ, ಹಿಂದೂಪುರ, ಪಾವಗಡ ಮತ್ತು ಹೊರ ರಾಜ್ಯಗಳಿಗೆ ಮತ್ತು ವಿವಿಧ ಹೋಬಳಿ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಬಸ್ ನಿಲ್ದಾಣಗಳಾಗಿವೆ.
ಈ ಹಿಂದೆ ರಾಘವೇಂದ್ರ ವೃತ್ತದಲ್ಲಿ ಸೂಕ್ತ ತಂಗುದಾಣವಿತ್ತು. ಆದರೆ ಹಲವು ವರ್ಷಗಳ ಹಿಂದೆ ಶಿಥಿಲಗೊಂಡಿದ್ದ ಈ ತಂಗುದಾಣ ಮಳೆಗೆ ಬಿದ್ದು ಹೋಗಿದೆ. ಅಂದಿನಿಂದ ಇಂದಿನವರೆಗೆ ಈ ತಂಗುದಾಣವನ್ನು ಪುರಸಭೆ ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡದ ಪರಿಣಾಮ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ.
ಏಕಶಿಲಾ ಬೆಟ್ಟದ ತಪ್ಪಲಿನಲ್ಲಿರುವ ಕೋಟೆ ಸಮೀಪದ ಮುಖ್ಯ ಬಸ್ ನಿಲ್ದಾಣ, ತುಮಕೂರು ಸರ್ಕಲ್ ಹಾಗೂ ಶಿರಾ ರಸ್ತೆಯಲ್ಲಿ ತಂಗುದಾಣಗಳಿವೆ. ಆದರೆ ತುಮಕೂರು ವೃತ್ತದಲ್ಲಿ ತಂಗುದಾಣವಿದ್ದರೂ ಬಸ್ಗಳು ಹೆಚ್ಚಾಗಿ ಬೇಕರಿ ಮುಂದೆ ತೆರಳುವುದರಿಂದ ಪ್ರಯಾಣಿಕರು ಅಲ್ಲೇ ನಿಂತು ಕಾಯುತ್ತಾರೆ.
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಸ್ಥಳೀಯರು ತ್ತಾಯಿಸಿದ್ದಾರೆ.
ಹೈ–ಟೆಕ್ ನಿಲ್ದಾಣ
ಪಟ್ಟಣದಲ್ಲಿ ಈಗಾಗಲೇ ವಿಶೇಷ ಅನದಾನದಲ್ಲಿ ₹25 ಕೋಟಿ ವೆಚ್ಚದ ರಸ್ತೆ ಅಭಿವೃದ್ದಿ ನಡೆಯುತ್ತಿದ್ದು, ಕಾಮಗಾರಿ ಮುಗಿದ ತಕ್ಷಣ ರಾಘವೇಂದ್ರ ಬಸ್ ನಿಲ್ದಾಣ ಮತ್ತು ಇತರೆ ಎಲ್ಲ ಬಸ್ ನಿಲ್ದಾಣಗಳಲ್ಲಿ ಹೈಟೆಕ್ ತಂಗುದಾಣಗಳನ್ನು ನಿರ್ಮಿಸಲು ಈಗಾಗಲೇ ಶಾಸಕ ಕೆ.ಎನ್. ರಾಜಣ್ಣ ಹಾಗೂ ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಅವರು ಲೋಕೋಪಯೋಗಿ ಇಲಾಖೆಗೆ ಸೂಚಿಸಿದ್ದಾರೆ.
– ಸುರೇಶ್, ಪುರಸಭೆ ಮುಖ್ಯಾಧಿಕಾರಿ
ಡಿಪ್ಲೊಮಾ ಓದುತ್ತಿದ್ದು, ಪ್ರತಿದಿನ ಕಾಲೇಜು ಮುಗಿದ ನಂತರ ಗ್ರಾಮಕ್ಕೆ ತೆರಳಲು ವೃತ್ತದಲ್ಲಿ ನಿಂತಿರಬೇಕು. ಜನಪ್ರತಿನಿಧಿಗಳು ಇಂತಹ ಸಮಸ್ಯೆಗೆ ಸ್ಪಂದಿಸಬೇಕು.ಚಂದನ್ ಕುಮಾರ್, ವಿದ್ಯಾರ್ಥಿ
ಬೆಂಗಳೂರಿನಿಂದ ಗ್ರಾಮಕ್ಕೆ ತೆರಳಲು ರಾಘವೇಂದ್ರ ನಿಲ್ದಾಣಕ್ಕೆ ಬರುತ್ತೇನೆ. ಆದರೆ ಇಲ್ಲಿ ತಂಗುದಾಣವಿಲ್ಲದ ಕಾರಣ ನಿಂತೇ ಕಾಯಬೇಕಾದ ಅನಿವಾರ್ಯವಿದೆ.ಆಶಾ, ಕೊಡಿಗೇನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.