ತುಮಕೂರು: ಮಂಗಳೂರಿನಲ್ಲಿ ಚಲಿಸುತ್ತಿದ್ದ ಆಟೊದಲ್ಲಿ ಸಂಭವಿಸಿದ ಬ್ಲಾಸ್ಟ್ನಲ್ಲಿ ತುಮಕೂರಿನಲ್ಲಿ ಕೆಲಸ ಮಾಡುತ್ತಿರುವ ಪ್ರೇಮ್ರಾಜ್ ಹುಟಗಿ ಅವರ ಹೆಸರಲ್ಲಿದ್ದ ಆಧಾರ್ಕಾರ್ಡ್ ಪತ್ತೆಯಾಗಿದ್ದು, ಇದಕ್ಕೆ ಪ್ರೇಮ್ರಾಜ್ ಭಾನುವಾರ ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರವಾಡ್ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.
ಆಟೊ ಬ್ಲಾಸ್ಟ್ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಪೊಲೀಸರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಹಿಂದೆ ಎರಡು ಬಾರಿ ನನ್ನ ಆಧಾರ್ ಕಾರ್ಡ್ ಕಳೆದು ಹೋಗಿತ್ತು. ಇದೀಗ ಆಧಾರ್ಕಾರ್ಡ್ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಆಧಾರ್ ನಕಲಿಯೋ, ಅಸಲಿಯೋ ಎಂಬುವುದು ತಿಳಿಯುತ್ತಿಲ್ಲ ಎಂದು ಪ್ರೇಮ್ರಾಜ್ ಪ್ರತಿಕ್ರಿಯೆ ನೀಡಿದರು.
ಹುಬ್ಬಳ್ಳಿ ನಿವಾಸಿಯಾಗಿರುವ ಪ್ರೇಮ್ರಾಜ್ ಕಳೆದ ಮೂರು ವರ್ಷಗಳಿಂದ ತುಮಕೂರು ತಾಲ್ಲೂಕಿನ ಹಿರೇಹಳ್ಳಿಯಲ್ಲಿ ವಾಸವಿದ್ದರು. ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಆರು ತಿಂಗಳಲ್ಲಿ ಎರಡು ಬಾರಿ ಆಧಾರ್ ಕಾರ್ಡ್ ಕಳೆದುಕೊಂಡಿದ್ದರು. ಒಂದು ಬಾರಿ ಧಾರವಾಡ-ಹುಬ್ಬಳ್ಳಿಗೆ ಹೋಗುವಾಗ, ಮತ್ತೊಮ್ಮೆ ಹುಬ್ಬಳ್ಳಿ- ಹಾವೇರಿ ಮಾರ್ಗದಲ್ಲಿ ಸಂಚರಿಸುವಾಗ ಆಧಾರ್ಕಾರ್ಡ್ ಕಳೆದುಕೊಂಡಿದ್ದರು. ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಈ ಮಾರ್ಗದಲ್ಲಿ ಪ್ರಯಾಣ ಮಾಡಿದ್ದರು. ಈಗ ಅವರ ಹೆಸರಿನಲ್ಲಿರುವ ಆಧಾರ್ಕಾರ್ಡ್ ಬ್ಲಾಸ್ಟ್ ಅಗಿದ್ದ ಆಟೊದಲ್ಲಿ ಪತ್ತೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.