ತುಮಕೂರು: ಸರ್ಕಾರದ ವಿವಿಧ ಇಲಾಖೆಗಳ ಕಟ್ಟಡ ದುರಸ್ತಿ ಮತ್ತು ನಿರ್ಮಾಣದ ವೇಳೆ ಕ್ಯೂರಿಂಗ್ಗೆ ಹೆಚ್ಚಿನ ಒತ್ತು ನೀಡಿ ಎಂದು ವಿವಿಧ ನಿರ್ಮಾಣ ಸಂಸ್ಥೆಗಳ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಲೆಗಳು, ಸರ್ಕಾರಿ ಕಚೇರಿಗಳ ದುರಸ್ತಿ ಮತ್ತು ಹೊಸ ಕಟ್ಟಡ ನಿರ್ಮಾಣ ಹಾಗೂ ಆರ್ಸಿಸಿ ಮತ್ತು ಇಟ್ಟಿಗೆ ಕಟ್ಟಡ ನಿರ್ಮಾಣದ ವೇಳೆ ಕ್ಯೂರಿಂಗ್ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದು, ಇದರಿಂದ ಕಟ್ಟಡಗಳ ಗುಣಮಟ್ಟ ಹಾಳಾಗುವುದರ ಜೊತೆಗೆ ಸಾರ್ವಜನಿಕರ ಹಣವೂ ಪೋಲಾಗುತ್ತಿದೆ ಎಂದರು.
ನಿರ್ಮಿತಿ ಕೇಂದ್ರ ಮತ್ತು ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಬಗ್ಗೆ ಹೆಚ್ಚಿನ ದೂರುಗಳು ಕೇಳಿ ಬರುತ್ತಿದೆ. ಕನಿಷ್ಠ 20 ದಿನ ಕ್ಯೂರಿಂಗ್ ಮಾಡಿದರೆ ಕಟ್ಟಡಗಳು ಹೆಚ್ಚು ಬಾಳಿಕೆ ಬರಲಿವೆ. ಆದ್ದರಿಂದ ಈ ಬಗ್ಗೆ ಹೆಚ್ಚಿನ ನಿಗಾವಹಿಸುವಂತೆ ನಿರ್ಮಿತಿ ಕೇಂದ್ರ, ಕೆ.ಆರ್.ಇ.ಡಿ.ಎಲ್, ಪಿಆರ್ಇಡಿ, ಆರ್.ಡಬ್ಲ್ಯು.ಎಸ್ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಿದರು.
ಪಾವಗಡ ತಾಲ್ಲೂಕಿನ ಗೋವಿಂದನಹಳ್ಳಿಯಲ್ಲಿ ಮುಚ್ಚಿ ಹೋಗಿದ್ದ ಶಾಲೆಯೊಂದು ಪುನಃ ಆರಂಭವಾಗಿ, ದೇವಾಲಯದ ಆವರಣದಲ್ಲಿ ನಡೆಯುತ್ತಿದೆ. ಶಾಲಾ ಕಟ್ಟಡ ಸಂಪೂರ್ಣ ಶಿಥಿಲವಾಗಿದೆ. ಶಾಲಾ ಆವರಣದಲ್ಲಿಯೇ ಹೊಸದಾಗಿ ನಿರ್ಮಿಸಿರುವ ಅಂಗನವಾಡಿ ಕಟ್ಟಡವನ್ನು ತಾತ್ಕಾಲಿಕವಾಗಿ ಶಾಲೆಗೆ ನೀಡುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಮಿತಿ ಸದಸ್ಯರಾದ ತಿಮ್ಮಯ್ಯ, ರೇಣುಕಾ, ಶಿವಮ್ಮ, ಅಂಬುಜ, ಭಾರತಿ ಹಿತೇಶ್ ಇದ್ದರು.
***
ಅನುದಾನ ವಾಪಸ್: ಉಪಾಧ್ಯಕ್ಷೆ ಗರಂ
ಜಿಲ್ಲೆಯ ವಿವಿಧ ಇಲಾಖೆಗಳ ಕಟ್ಟಡ ದುರಸ್ತಿಗಾಗಿ ಬಿಡುಗಡೆಯಾಗಿದ್ದ ಸುಮಾರು ₹ 22 ಲಕ್ಷವು ಕಾಮಗಾರಿ ಆರಂಭವಾಗದ ಹಿನ್ನೆಲೆಯಲ್ಲಿ ವಾಪಸ್ ಆಗಿದೆ. ಅನುದಾನವೇ ಇಲ್ಲದ ಈ ಸಮಯದಲ್ಲಿ ಬಿಡುಗಡೆಯಾದ ಅನುದಾನ ವಾಪಸ್ ಆದರೆ ಹೇಗೆ ಎಂದು ಅಧಿಕಾರಿಗಳ ಕಾರ್ಯವೈಖರಿಗೆ ಶಾರದಾ ಅಸಮಾಧಾನ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.