ADVERTISEMENT

ತುಮಕೂರು: ಬೇಸಿಗೆಯಲ್ಲೂ ಹಾಲು ಉತ್ಪಾದನೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 14 ಮೇ 2025, 15:45 IST
Last Updated 14 ಮೇ 2025, 15:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಬೇಸಿಗೆ ಸಮಯದಲ್ಲೂ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಗಣನೀಯವಾಗಿ ಹೆಚ್ಚಳವಾಗಿದ್ದು, ಹೈನೋದ್ಯಮ ರೈತರ ಬದುಕು ಮುನ್ನಡೆಸುವಲ್ಲಿ ಊರುಗೋಲಾಗಿ ನಿಂತಿದೆ.

ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಹಾಲು ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಆದರೆ ಈ ಬಾರಿ ಉತ್ಪಾದನೆಯಲ್ಲಿ ಏರಿಕೆ ದಾಖಲಿಸಿದ್ದು, ಜಿಲ್ಲೆಯು ಹೈನು ಕ್ರಾಂತಿಗೆ ಮುನ್ನುಡಿ ಬರೆದಿದೆ.

ಪ್ರಸ್ತುತ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ತುಮುಲ್) 9.39 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದೆ. ಕಳೆದ ವರ್ಷದ ಇದೇ ಸಮಯದಲ್ಲಿ 8.11 ಲಕ್ಷ ಲೀಟರ್ ಸಂಗ್ರಹವಾಗಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ 1.28 ಲಕ್ಷ ಲೀಟರ್ ಹೆಚ್ಚುವರಿಯಾಗಿ ಉತ್ಪಾದನೆ ಆಗುತ್ತಿದೆ. ಕಳೆದ ಫೆಬ್ರುವರಿಯಲ್ಲಿ 7.40 ಲಕ್ಷ ಲೀಟರ್, ಮಾರ್ಚ್‌ನಲ್ಲಿ 7.49 ಲಕ್ಷ ಲೀಟರ್, ಏಪ್ರಿಲ್‌ನಲ್ಲಿ 8.26 ಲಕ್ಷ ಲೀಟರ್ ಹಾಲು ಸಂಗ್ರಹವಾಗಿದೆ. ಬೇಸಿಗೆಯ ಮೂರು ತಿಂಗಳ ಕಾಲವೂ ಹಾಲು ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ADVERTISEMENT

ಹೆಚ್ಚಳಕ್ಕೆ ಕಾರಣ: ರೈತರಿಂದ ಖರೀದಿಸುವ ಹಾಲಿನ ದರವನ್ನು ಲೀಟರ್‌ಗೆ ₹6 ಹೆಚ್ಚಳ ಮಾಡಲಾಗಿದ್ದು, ಲೀಟರ್ ₹31ರಿಂದ ₹37ಕ್ಕೆ ಏರಿಕೆಯಾಗಿದೆ. ಬೆಲೆ ಸುಧಾರಿಸಿದ್ದರಿಂದ ರೈತರು ಹಾಲು ಉತ್ಪಾದನೆಗೆ ಆಸಕ್ತಿ ತೋರುತ್ತಿದ್ದಾರೆ. ಉತ್ತಮ ಬೆಲೆ ಸಿಗುತ್ತಿರುವುದರಿಂದ ಖಾಸಗಿ ಡೇರಿಗಳಿಗೆ ಹಾಲು ಸರಬರಾಜು ಕಡಿಮೆಮಾಡಿ ತುಮುಲ್‌ನತ್ತ ಹೆಜ್ಜೆ ಹಾಕಿದ್ದಾರೆ.

ಪ್ರಮುಖವಾಗಿ ಬೇಸಿಗೆ ಸಮಯದಲ್ಲಿ ಹಾಲು ಕೊಡುವ ಹಸುಗಳಿಗೆ ಹಸಿರು ಮೇವು ಸಿಗುವುದಿಲ್ಲ. ಬಿಸಿಲಿನ ತಾಪಕ್ಕೆ ಬಳಲುವುದು ಹಾಗೂ ಇತರೆ ಕಾರಣಗಳಿಂದಾಗಿ ಹಾಲು ಉತ್ಪಾದನೆಯೂ ಕಡಿಮೆ ಇರುತ್ತದೆ. ಆದರೆ ಈ ಬಾರಿ ಅಷ್ಟೊಂದು ಸಮಸ್ಯೆಯಾದಂತೆ ಕಾಣುತ್ತಿಲ್ಲ.

ಜಿಲ್ಲೆಯಲ್ಲಿ ಹಿಂದಿನ ವರ್ಷ ಉತ್ತಮ ಮಳೆಯಾಗಿದ್ದು, ಹೇಮಾವತಿ ನಾಲೆಯಲ್ಲೂ ನೀರು ಹರಿಸಲಾಗಿತ್ತು. ಕೆರೆ ಕಟ್ಟೆಗಳು ಭರ್ತಿಯಾಗಿದ್ದು, ಅಂತರ್ಜಲವೂ ಸುಧಾರಿಸಿತ್ತು. ಕೊಳವೆ ಬಾವಿಗಳಲ್ಲೂ ನೀರಿನ ಕೊರತೆಯಾಗಿಲ್ಲ. ನೀರಾವರಿ ಸೌಲಭ್ಯ ಇದ್ದವರು ಹಸಿರು ಮೇವು ಬೆಳೆದುಕೊಂಡಿದ್ದು, ಹಸುಗಳಿಗೆ ಒದಗಿಸುತ್ತಿದ್ದಾರೆ. ಇದರಿಂದಾಗಿ ಹಾಲು ಉತ್ಪಾದನೆಯಲ್ಲಿ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಲಾಭದತ್ತ ತುಮುಲ್

ರೈತರಿಂದ ಸಂಗ್ರಹಿಸಿದ ಹಾಲನ್ನು ಹಾಲು ಮೊಸರಿನ ರೂಪದಲ್ಲೇ ಮಾರಾಟ ಮಾಡುತ್ತಿರುವುದು ಡೇರಿಯ ನಷ್ಟ ಕಡಿಮೆಯಾಗಿದ್ದು ಆದಾಯದತ್ತ ಹೆಜ್ಜೆ ಹಾಕಿದೆ. ಗ್ರಾಹಕರಿಗೆ ಮಾರಾಟ ಮಾಡಿದ ನಂತರವೂ ಸಾಕಷ್ಟು ಪ್ರಮಾಣದಲ್ಲಿ ಹಾಲು ಉಳಿಯುತ್ತಿದ್ದರೆ ಅದನ್ನು ಬಳಸಿ ಹಾಲಿನ ಪೌಡರ್ ತಯಾರಿಸಲಾಗುತ್ತದೆ. ಉತ್ತಮ ಬೆಲೆ ಸಿಗುವವರೆಗೂ ದಾಸ್ತಾನು ಮಾಡಿ ಇಟ್ಟುಕೊಳ್ಳಬೇಕಾಗುತ್ತದೆ. ಪ್ರಸ್ತುತ ಪೌಡರ್ ಉತ್ಪಾದನೆ ಕಡಿಮೆಯಾಗಿದ್ದು ಹಾಲನ್ನೇ ನೇರವಾಗಿ ಮಾರಾಟ ಮಾಡಲಾಗುತ್ತಿದೆ. ಸದ್ಯಕ್ಕೆ ಮುಂಬೈ ಮಾರುಕಟ್ಟೆಯಲ್ಲೇ ಪ್ರತಿ ದಿನ 2 ಲಕ್ಷ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದೆ. ಬೆಣ್ಣೆ ತುಪ್ಪ ಹಾಗೂ ಡೇರಿ ಉತ್ಪನ್ನಗಳ ತಯಾರಿಕೆಗೆ ಅಗತ್ಯದಷ್ಟು ಬಳಸಿಕೊಳ್ಳಲಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಪೌಡರ್ ತಯಾರಿಸಿದರೆ ನಷ್ಟದ ಪ್ರಮಾಣವೂ ಹೆಚ್ಚಿರುತ್ತದೆ. ಈಗ ಪೌಡರ್ ತಯಾರಿಕೆ ತಗ್ಗಿರುವುದು ಡೇರಿಯ ಆರ್ಥಿಕ ಪರಿಸ್ಥಿತಿ ಸುಧಾರಿಸುವಂತೆ ಮಾಡಿದೆ ಎಂದು ತುಮುಲ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.