ADVERTISEMENT

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಮಾಧುಸ್ವಾಮಿ ಗರಂ

​ಪ್ರಜಾವಾಣಿ ವಾರ್ತೆ
Published 17 ಮೇ 2021, 19:52 IST
Last Updated 17 ಮೇ 2021, 19:52 IST
ಜೆ.ಸಿ. ಮಾಧುಸ್ವಾಮಿ ಮತ್ತು ಬಿ.ಎಸ್. ಯಡಿಯೂರಪ್ಪ
ಜೆ.ಸಿ. ಮಾಧುಸ್ವಾಮಿ ಮತ್ತು ಬಿ.ಎಸ್. ಯಡಿಯೂರಪ್ಪ   

ತುಮಕೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನಿಮ್ಮ ಜತೆಯಲ್ಲಿ ಇರುವವರಿಗೆ ಉದಾರವಾಗಿ ವರ್ತಿಸುವಂತೆ ಹೇಳಿ. ಆ ಮೇಲೆ ನಮ್ಮ ಪರಿಶೀಲನೆ ನಡೆಸಿ’ ಎಂದು ನೇರವಾಗಿ ಹೇಳಿದ್ದಾರೆ.

ಸೋಮವಾರ ಸಂಜೆ ಕೋವಿಡ್ ನಿಯಂತ್ರಣ ಸಂಬಂಧ ಮುಖ್ಯಮಂತ್ರಿ ಜತೆಗೆ ನಡೆದ ವಿಡಿಯೊ ಸಂವಾದದಲ್ಲಿ ಸಚಿವರು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದಿದ್ದಾರೆ. ‘ಮೊದಲು ನಮ್ಮ ಸಮಸ್ಯೆ ಪರಿಹರಿಸಿ. ನಂತರ ಪರಿಶೀಲನೆ ನಡೆಸಿ’ ಎಂದು ಜೋರಾಗಿಯೇ ಮುಖ್ಯಮಂತ್ರಿ ಅವರನ್ನು ಪ್ರಶ್ನಿಸಿದರು ಎಂದು ಮೂಲಗಳು ತಿಳಿಸಿವೆ.

‘ಹಿಂದೆಯೇ ಜಿಲ್ಲೆಯಲ್ಲಿ ಆಮ್ಲಜನಕದ ಒಂದು ಪ್ಲಾಂಟ್ ನಿರ್ಮಾಣಕ್ಕೆ ಅನುಮತಿ ನೀಡಿದ್ದರೆಈ ವೇಳೆಗೆ ಉತ್ಪಾದನೆ ಆರಂಭವಾಗುತ್ತಿತ್ತು. ನಮಗೆ ಸಮಸ್ಯೆ ಆಗುತ್ತಿರಲಿಲ್ಲ. ಎಚ್.ಡಿ. ಕೋಟೆಯಲ್ಲಿ ಆಮ್ಲಜನಕ ಘಟಕ ನಿರ್ಮಾಣ ಮಾಡಿದರೆ ಏನು ಪ್ರಯೋಜನ. ನಮಗೆ ಅವಕಾಶ ನೀಡಿದ್ದರೆ ಸಮಸ್ಯೆ ಉಂಟಾಗುತ್ತಿರಲಿಲ್ಲ. ಇದಕ್ಕೆ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರು ಅವಕಾಶ ನೀಡಲಿಲ್ಲ. ನಿಮ್ಮ ಜತೆಯಲ್ಲಿ ಇರುವವರಿಗೆ ರಾಜ್ಯವೆಲ್ಲ ನಮ್ಮದೇ ಎನ್ನುವಂತೆ ವರ್ತಿಸಲು ಹೇಳಿ’ ಎಂದು ಕೋಪ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಜಿಲ್ಲೆ ಸಮಸ್ಯೆಗಳಿಗೆ ಒಂದು ತಿಂಗಳಿನಿಂದ ಸಣ್ಣ ಪರಿಹಾರವೂ ಸಿಕ್ಕಿಲ್ಲ. ಒಮ್ಮೆ ಮಾಡಿ ಎನ್ನುತ್ತೀರಿ. ಇನ್ನೊಮ್ಮೆ ಮಾಡಬೇಡಿ ಎನ್ನುತ್ತೀರಿ. ಹೀಗಾದರೆ ನಾವು ಕೆಲಸ ಮಾಡುವುದಾದರೂ ಹೇಗೆ’ ಎಂದಿದ್ದಾರೆ.

ಜಿಲ್ಲೆಯಲ್ಲಿ ಆಮ್ಲಜನಕ ಕೊರತೆಯಾದ ಸಮಯದಲ್ಲಿ ಮುಖಂಡರೊಬ್ಬರು ಪ್ರಶ್ನಿಸಿದಾಗ, ‘ಮುಖ್ಯಮಂತ್ರಿ ಕೇಳಿ ಆಮ್ಲಜನಕ ಪಡೆದುಕೊಳ್ಳಿ’ ಎಂದು ಸಚಿವರು ಹೇಳಿದ್ದು ವಿವಾದಕ್ಕೆ ಸಿಲುಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.