ADVERTISEMENT

ತುಮಕೂರು | ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಸ್ವಾಗತಿಸಿದ ಇಲಿ!

ಜಿಲ್ಲಾ ಆಸ್ಪತ್ರೆ ಸ್ಥಿತಿ ಕಂಡು ಜಿಲ್ಲಾಧಿಕಾರಿ ಗರಂ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 14:12 IST
Last Updated 22 ಜುಲೈ 2024, 14:12 IST
ತುಮಕೂರು ಜಿಲ್ಲಾ ಆಸ್ಪತ್ರೆಗೆ ಸೋಮವಾರ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಭೇಟಿ ನೀಡಿ ಮಗುವಿನ ಆರೋಗ್ಯ ವಿಚಾರಿಸಿದರು
ತುಮಕೂರು ಜಿಲ್ಲಾ ಆಸ್ಪತ್ರೆಗೆ ಸೋಮವಾರ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಭೇಟಿ ನೀಡಿ ಮಗುವಿನ ಆರೋಗ್ಯ ವಿಚಾರಿಸಿದರು   

ತುಮಕೂರು: ಜಿಲ್ಲಾ ಆಸ್ಪತ್ರೆಗೆ ಸೋಮವಾರ ದಿಢೀರ್‌ ಭೇಟಿ ನೀಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಅವರನ್ನು ಇಲಿಗಳ ಹಿಂಡು ಸ್ವಾಗತ ಕೋರಿತು!

ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಗುಣಮಟ್ಟದ ಚಿಕಿತ್ಸೆ ಕೊಡುವುದು ಬಿಟ್ಟು ಇಲಿ, ಸೊಳ್ಳೆ ಸಾಕಿದ್ದೀರಾ? ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಸ್ಗರ್‌ ಬೇಗ್‌ ಅವರನ್ನು ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆ ಸ್ವಚ್ಛಗೊಳಿಸದಿದ್ದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ತುರ್ತು ನಿಗಾ ಘಟಕದ ಬಳಿಯ ಶೌಚಾಲಯದಲ್ಲಿ ಸಂಗ್ರಹಿಸಿದ್ದ ರಾಶಿ ರಾಶಿ ಕಸದ ಮೂಟೆ, ಕೆಟ್ಟ ವಾಸನೆ ಬೀರುತ್ತಿದ್ದ ಡಾಟಾ ಎಂಟ್ರಿ ಆಪರೇಟರ್‌ ಕೊಠಡಿ, ಆಸ್ಪತ್ರೆಯ ಅನೈರ್ಮಲ್ಯ ಜಿಲ್ಲಾಧಿಕಾರಿಯ ಆಕ್ರೋಶಕ್ಕೆ ಕಾರಣವಾಯಿತು. ‘ರೋಗಿಯೊಬ್ಬರು ಮಾಡಿದ್ದ ವಾಂತಿ ಹಾಗೆ ಇದೆ. ಪ್ರತಿ ದಿನ ಸ್ವಚ್ಛಗೊಳಿಸುವುದಿಲ್ಲವೇ? ಸಂಜೆ 6 ಗಂಟೆಯ ಒಳಗೆ ಆಸ್ಪತ್ರೆ ಸ್ವಚ್ಛಗೊಳಿಸದಿದ್ದರೆ ಸೇವೆಯಿಂದ ವಜಾ ಮಾಡಲಾಗುವುದು’ ಎಂದು ಗ್ರೂಪ್‌ ಡಿ ನೌಕರರ ಮೇಲೆ ಸಿಡಿಮಿಡಿಗೊಂಡರು.

ADVERTISEMENT

‘ಸಿಬ್ಬಂದಿ ಕೊಠಡಿಗಳೇ ಶುಚಿಯಾಗಿಲ್ಲ. ಆಸ್ಪತ್ರೆ ವಾರ್ಡ್‌ಗಳು ಯಾವ ಮಟ್ಟಿಗೆ ಸ್ವಚ್ಛವಾಗುತ್ತವೆ? ಸಿಬ್ಬಂದಿ ಆಸ್ಪತ್ರೆಯನ್ನು ತಮ್ಮ ಮನೆಯಂತೆ ಕಾಣಬೇಕು. ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು. ಸರ್ಕಾರದ ಅನುದಾನ ಇದ್ದರೂ ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಒಮ್ಮೆ ಖಾಸಗಿ ಆಸ್ಪತ್ರೆ ನೋಡಿಕೊಂಡು ಬನ್ನಿ. ಖಾಸಗಿಗಿಂತ ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ವಾತಾವರಣ, ನೈರ್ಮಲ್ಯ, ಚಿಕಿತ್ಸೆ ದೊರೆಯುಬೇಕು’ ಎಂದು ಸೂಚಿಸಿದರು.

ಅನುಪಯುಕ್ತ ವೈದ್ಯಕೀಯ ಸಲಕರಣೆಯನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಆಸ್ಪತ್ರೆ ಹೊರಾಂಗಣದಲ್ಲಿ ಬೆಳೆದಿರುವ ಹುಲ್ಲು, ಗಿಡ ತೆರವುಗೊಳಿಸಬೇಕು ಎಂದು ನಿರ್ದೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.